ಹಾವೇರಿ: ಜಿಲ್ಲೆಯ ಬ್ಯಾಡಗಿ ತಾ| ಗುಂಡೆನಹಳ್ಳಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿಯಾಗಿ 13 ಮಂದಿ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಚಿಂಚೊಳ್ಳಿ ಮಾಯಮ್ಮ ದೇವರ ದರ್ಶನ ಮುಗಿಸಿ ವಾಪಸ್ ಆಗ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಇನ್ನು ದುರಂತ ಹಾಗೂ ನೋವಿನ ಸಂಗತಿ ಏನೆಂದರೆ ಹೆತ್ತ ತಾಯಿಯ ಎದರೇ ಅವಳಿ ಮಕ್ಕಳು ಕಣ್ಮುಚ್ಚಿವೆ. ರಕ್ಷಣೆಗೆ ಬಂದಿದ್ದ ಆ್ಯಂಬುಲೆನ್ಸ್ ಸಿಬ್ಬಂದಿ ಇದನ್ನು ಕಣ್ಣಾರೆ ಕಂಡು ಕಣ್ಣೀರು ಇಟ್ಟಿದ್ದಾರೆ.
ಮೃತರೆಲ್ಲ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಮ್ಮಿಹಟ್ಟಿ ಅವರು ಎಂದು ತಿಳಿದುಬಂದಿದೆ. ಇದೀಗ ದುರಂತದಲ್ಲಿ ಬದುಕುಳಿದ ಓರ್ವ ಬಾಲಕಿ ದುರ್ಘಟನೆ ಬಗ್ಗೆ ಮಾತನಾಡಿದ್ದಾಳೆ. ಮೂರು ದಿನಗಳ ಹಿಂದೆ ದೇವರ ದರ್ಶನಕ್ಕೆ ನಾವೆಲ್ಲ ಹೋಗಿದ್ದೇವು. ಚಿಂಚೊಳ್ಳಿ ಮಾಯಮ್ಮ ದೇವಿಯ ದರ್ಶನ ಮುಗಿಸಿ ವಾಪಸ್ ಬರುವಾಗ ಜೋರಾಗಿ ಸೌಂಡ್ ಬಂತು. ಆಗ ಎಲ್ಲರೂ ಜೋರಾಗಿ ಚಿರಲು ಶುರುಮಾಡಿದ್ದಾರೆ. ನನಗೆ ಏನಾಗಿದಿಯೋ ಗೊತ್ತಿಲ್ಲ, ಆಸ್ಪತ್ರೆಯಲ್ಲಿದ್ದಾಗ ಪ್ರಜ್ಞೆ ಬಂತು. ನಮ್ಮದು ಒಂದೇ ಕುಟುಂಬ. ಹದಿನಾರು ಜನರು ಹೋಗಿದ್ದೇವು. ನಮ್ಮ ಅಪ್ಪನ ಹೆಸರು ನಾಗೇಶ್. ಅಣ್ಣ-ತಮ್ಮರು, ಚಿಕ್ಕಪ್ಪ, ದೊಡ್ಡಪ್ಪ ಅವರ ಮಕ್ಕಳು ಎಲ್ಲಾ ಸೇರಿ ಹೋಗಿದ್ವಿ ಎಂದು ಸಾವನ್ನು ಗೆದ್ದು ಬಂದ ಅರ್ಪಿತಾ ಮಾಹಿತಿ ನೀಡಿದ್ದಾಳೆ.