ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರು ಬಾರದ ಲೋಕಕ್ಕೆ ಪಯಣ ಬೆಳೆಸಿ ಇಂದು ಭಾನುವಾರಕ್ಕೆ ಮೂರು ದಿನ ಕಳೆದಿದೆ. ಅಂತಿಮ ಕ್ರಿಯೆ ಕಾರ್ಯದಲ್ಲಿ ಅವರ ಪುತ್ರ ವಿನೋದ್ ರಾಜ್ ಪತ್ನಿ ವಿನು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಲೀಲಾವತಿ ಅಮ್ಮನವರು ಎಷ್ಟು ದೊಡ್ಡ ಕಲಾವಿದೆ ಆದರೂ ಜೀವನದಲ್ಲಿ ಬಹಳ ಶಿಸ್ತುಬದ್ಧವಾಗಿದ್ದರು. ಅವರ ಗುಣಗಳನ್ನು ನಾನು ನನ್ನ ಮಗನಿಗೂ ಹೇಳಿಕೊಟ್ಟಿದ್ದೇನೆ. ಅತ್ತೆಯವರಿಂದಲೇ ಅಷ್ಟು ಉತ್ತಮ ಗುಣನಡತೆ, ಶಿಸ್ತುಬದ್ಧ ಜೀವನ, ಸಾಧನೆ ಸಾಧ್ಯವಾಯಿತು.ಅವರನ್ನು ನೋಡಿ ಜೀವನದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಅವರಂಥ ಅತ್ತೆ ಪಡೆಯುವುದಕ್ಕೂ ನಾನು ಮತ್ತು ಅವರಂಥ ಅಜ್ಜಿ ಪಡೆಯುವುದಕ್ಕೂ ನನ್ನ ಮಗ ಪುಣ್ಯ ಮಾಡಿದ್ದೇವೆ ಎಂದರು.
ತಾಯಿ ಕಳೆದುಕೊಂಡ ವಿನೋದ್ ರಾಜ್ ಅವರು ತುಂಬ ದುಃಖದಲ್ಲಿದ್ದಾರೆ. ತಾಯಿ ಪ್ರೀತಿಯನ್ನು ಯಾರೂ ನೀಡಲು ಸಾಧ್ಯವಿಲ್ಲ, ಆದಷ್ಟು ಪ್ರೀತಿ ವಿಶ್ವಾಸ ತೋರಿಸಿ ವಿನೋದ್ ಅವರು ಖುಷಿಯಾಗಿರುವಂತೆ ನೋಡಿಕೊಳ್ಳುತ್ತೇವೆ ಎಂದು ಲೀಲಾವತಿ ಅವರ ಚೆನ್ನೈಯಲ್ಲಿ ವಾಸಿಸುತ್ತಿರುವ ಸೊಸೆ ವಿನು ಹೇಳಿದರು