ಬೆಂಗಳೂರು: ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್ ನಲ್ಲಿ ಮುಗಿದಿದ್ದು, ಮೃತ ದೇಹವನ್ನು ಇಂದು ಸಂಜೆ ಬೆಂಗಳೂರಿಗೆ ತರಲಾಗುವುದು ಎಂದು ಸ್ಪಂದನಾ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ಮುಗಿದಿದ್ದರೂ, ಇನ್ನೂ ಹಲವು ವಿದೇಶಿ ಪ್ರಕ್ರಿಯೆಗಳು ನಡೆಯಬೇಕಿವೆ.
‘ಸ್ಪಂದನಾ ಸಾವಿನ ಕುರಿತಂತೆ ಬ್ಯಾಂಕಾಕ್ ಪ್ರಕ್ರಿಯೆಗಳು ಮುಗಿಯಲು ನಾಳೆ ಮಧ್ಯಾಹ್ನ ಆಗುತ್ತದೆ. ಆದ್ದರಿಂದ ಪ್ರಕ್ರಿಯೆಗಳು ಮುಗಿಸಿ ಮೃತದೇಹ ಸಂಜೆ ಹೊರಡಲಾಗುತ್ತದೆ. ರಾತ್ರಿಯ ಒಳಗೆ ಮೃತ ದೇಹ ಬೆಂಗಳೂರಿಗೆ ಬರಲಿದೆ. ಇಂದು ರಾತ್ರಿ 11:30ರ ಹೊತ್ತಿಗೆ ಮೃತ ದೇಹ ಬರಬಹುದು. ಬುಧವಾರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದಿದ್ದಾರೆ.
ಮೃತದೇಹವನ್ನು ಬೆಂಗಳೂರಿಗೆ ತರಲು ಕುಟುಂಬಿಕರು ಸಿದ್ಧತೆಗಳನ್ನು ನಡೆಸಿದ್ದಾರೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿಯ ಸಹಾಯವನ್ನು ಪಡೆದುಕೊಳ್ಳಲಾಗುತ್ತಿದೆ. ಮೃತದೇಹವನ್ನು ವಿಶೇಷ ಕಾರ್ಗೊ ವಿಮಾನದಲ್ಲಿ ಬೆಂಗಳೂರಿಗೆ ತರುವ ಸಾಧ್ಯತೆಗಳಿವೆ.
ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಇಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಬಹುಶಃ ಮಲ್ಲೇಶ್ವರದಲ್ಲಿರುವ ಸ್ಪಂದನಾ ಅವರ ತಂದೆ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ. ಅಂತಿಮ ಸಂಸ್ಕಾರಗಳು ಬೆಂಗಳೂರಿನಲ್ಲೇ ನಡೆಯುತ್ತವೆಯೇ ಅಥವಾ ಬೆಳ್ತಂಗಡಿಯಲ್ಲಿರುವ ಕುಟುಂಬದ ಜಾಗದಲ್ಲಿ ನಡೆಯಲಿದೆಯೇ ಎನ್ನುವುದು ವಿಜಯ ರಾಘವೇಂದ್ರ ಅವರು ನಿರ್ಧಾರವನ್ನು ಅವಲಂಬಿಸಿದೆ ಎಂದು ಸ್ಪಂದನಾ ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.