ತುಮಕೂರು: ಆತ್ಮದ ಸಮಸ್ಥಿತಿಗೆ ದೈಹಿಕ ಸಮಾಧಾನ ಅಗತ್ಯ.ಅದರಲ್ಲಿಯೂ ಕಲಾವಿದರಿಗೆ ಈ ಸೂಕ್ಷ್ಮದ ಅರಿವು ಇರಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟ ಹಾಗೂ ರಂಗ ಕೀರ್ತನ ಸಂಪದ(ರಿ) ಮಲ್ಲಸಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತೊಗಲು ಗೊಂಬೆ ಕಲಾವಿದ, ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಸಾಧನೆಯ ಹಾದಿಯಲ್ಲಿದ್ದವರಿಗೆ ಒಂದಿಲೊಂದು ದಿನ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಅನ್ವರ್ಥ ನಾಮದಂತೆ ಬದುಕಿ, ಇತರರಿಗೆ ಮಾರ್ಗದರ್ಶ ಕರಾಗಿದ್ದವರು ಬೆಳಗಲ್ಲು ವೀರಣ್ಣ ಎಂದರು.
ತಮ್ಮ ಇಡೀ ಕುಟುಂಬವೇ ಅಳಿವಿನ ಅಂಚಿನಲ್ಲಿರುವ ತೊಗಲುಗೊಂಬೆಯಾಟದಲ್ಲಿ ತೊಡಗಿಸಿಕೊಂಡು, ಅದನ್ನು ಅಂತರ ರಾಷ್ಟ್ರೀಯ ಮಟ್ಟದವರೆಗೆ ತೆಗೆದುಕೊಂಡು ಹೋದವರು, ಅವರ ಕಲೆಯನ್ನು ಹತ್ತಿರದಿಂದ ವೀಕ್ಷಿಸುವ, ಅವರೊಂದಿಗೆ ಸಂವಾದ ನಡೆಸುವ ಅವಕಾಶ ದೊರೆಕಿದ್ದು, ನನ್ನ ಬದುಕಿನ ಪುಣ್ಯ ಎಂದು ಕೆ.ಎಸ್.ಸಿದ್ದಲಿಂಗಪ್ಪ ಬಾವುಕರಾಗಿ ನುಡಿದರು.
ಶ್ರೀರಂಗ ರಂಗ ಹವ್ಯಾಸಿ ಕಲಾ ತಂಡದ ನಿರ್ದೇಶಕರಾದ ಹೆಚ್.ಎಂ.ರಂಗಯ್ಯ ಮಾತನಾಡಿ, ಬೆಳಗಲ್ಲು ವೀರಣ್ಣ ಅವರ ಸರಳತೆ, ಎಲ್ಲರೊಂದಿಗಿನ ಒಟನಾಟ, ನಾಟಕಮನೆ ಮಹಾಲಿಂಗು ಮತ್ತು ಅವರ ನಡುವಿನ ಸಂಬಂಧ, ಅವರು ತುಮಕೂರಿಗೆ ಬರಲು ಕಾರಣವಾದ ಪ್ರಸಂಗಗಳನ್ನು ಮೇಲುಕು ಹಾಕಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಬೆಳಗಲ್ಲು ವೀರಣ್ಣ ಅವರ ಕುರಿತು ಡಮರುಗ ರಂಗಸಂಪನ್ಮೂಲ ಕೇಂದ್ರದ ಉಮೇಶ್, ಕಾರ್ಮಿಕ ಮುಖಂಡ ಬಿ.ಉಮೇಶ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ ಅವರುಗಳು ಮಾತನಾಡಿದರು.ಕಲಾಶ್ರೀ ಡಾ.ಲಕ್ಷ್ಮಣದಾಸ್ ಬೆಳಗಲ್ಲು ವೀರಣ್ಣ ಅವರ ಕಲಾ ಬದುಕು ಮತ್ತು ಅಕಾಡೆಮಿ ಅಧ್ಯಕ್ಷರಾಗಿ ಅವರ ಕಾರ್ಯವೈಖರಿ ಕುರಿತು ಮಾತನಾಡಿದರು.
ಸ್ವರ ಸಿಂಚನ ಸುಗಮ ಸಂಗೀತ ಮತ್ತು ಜಾನಪದ ಕಲಾ ಸಂಘದ ಕೆಂಕೆರೆ ಮಲ್ಲಿಕಾರ್ಜುನ್, ರಂಗಸೊಗಡು ಕಲಾ ಟ್ರಸ್ಟ್ನ ಸ್ವಾಂದೇನಹಳ್ಳಿ ಸಿದ್ದರಾಜು ಅವರುಗಳು ಕಾರ್ಯಕ್ರಮ ನಿರೂಪಿಸಿದರು.