ರಾಮನಗರ: ದನಗಾಹಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಅಚ್ಚಲುದೊಡ್ಡಿ ಸಮೀಪದ ಅರ್ಕಾವತಿ ನದಿ ತಟದಲ್ಲಿ ನಡೆದಿದೆ.
ಕೊಲೆಯಾಗಿರುವ ಮಹಿಳೆ ಅಚ್ಚಲುದೊಡ್ಡಿ ಕಾಲೋನಿ ನಿವಾಸಿ ಕೆಂಪಮ್ಮ(45) ಎಂದು ಗುರುತಿಸಲಾಗಿದೆ. ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದ ಕೆಂಪಮ್ಮ ಹೈನುಗಾರಿಕೆ ಕಸುಬಲ್ಲೂ ತೊಡಗಿಸಿಕೊಂಡಿದ್ದರು. ಮೃತರು ಎಂದಿನಂತೆ ಗುರುವಾರ ಸಂಜೆ ಅಚ್ಚಲುದೊಡ್ಡಿಯ ಸೇನಾಪತಿ ವೈಟ್ಲೆ ಕಾರ್ಖಾನೆ ಬಳಿ ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಶವವನ್ನು ಮೂಟೆಯಲ್ಲಿ ಕಟ್ಟಿ ಹಳ್ಳದಲ್ಲಿ ಎಸೆದು ಹೋಗಿದ್ದಾರೆ.
ಕತ್ತಲಾದರೂ ಕೆಂಪಮ್ಮ ಮನೆಗೆ ವಾಪಸ್ ಬಾರದ ಕಾರಣ ಆತಂಕಗೊಂಡ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ಸೇನಾಪತಿ ವೈಟ್ಲೆ ಕಾರ್ಖಾನೆ ಹಿಂಭಾಗದ ಅರ್ಕಾವತಿ ನದಿ ತೀರದಲ್ಲಿ ಮೂಟೆಯೊಂದು ಕಂಡುಬಂದಿದ್ದು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು ಚೀಲವನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಕೆಂಪಮ್ಮ ಅವರ ಶವ ಇರುವುದು ಪತ್ತೆಯಾಗಿದೆ.
ಸಂಜೆ 5.30 ರಿಂದ 6 ಗಂಟೆಯ ವೇಳೆಯಲ್ಲಿ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಕೊಲೆ ಮಾಡಿದ ನಂತರ ಆಕೆಯ ಶವವನ್ನು ಚೀಲದಲ್ಲಿ ಸುತ್ತಿ ಹಳ್ಳದಲ್ಲಿ ಬಿಸಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯಾರು ಯಾವ ಕಾರಣಕ್ಕೆ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.
ಈ ಸಂಬಂಧ ಕೆಂಪಮ್ಮ ಅವರ ಪತಿ ಕೆಂಚಪ್ಪ ನೀಡಿದ ದೂರಿನ ಮೇರೆಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.