ರಾಮನಗರ: ತಾಲ್ಲೂಕಿನ ಕೂಟಗಲ್ ಹೋಬಳಿ ಕೂನಮುದ್ದನಹಳ್ಳಿ ಮತ್ತು ಅರೆಹಳ್ಳಿ ಗ್ರಾಮಗಳ ನಡುವಿನ ಬಿಕ್ಕಲು ಉಚ್ಚಮ್ಮನ ಕೆರೆಗೆ ಎರಡು ಗ್ರಾಮದ ಗ್ರಾಮಸ್ಥರು ಸಡಗರ ಸಂಭ್ರಮದಿಂದ ಬಾಗಿನ ಅರ್ಪಿಸಿದರು.
ಕಳೆದ ೨೫ ವರ್ಷಗಳ ಹಿಂದೆ ತುಂಬಿದ್ದ ಕೆರೆ ಇದೀಗ ಮೈದುಂಬಿ ಕೋಡಿ ಬಿದ್ದಿದೆ. ಇದರಿಂದ ಎರಡು ಗ್ರಾಮಗಳ ಗ್ರಾಮಸ್ಥರು ಕೆರೆ ದಂಡೆಯಲ್ಲಿರುವ ಕೋಡಿ ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅರೇಹಳ್ಳಿ ಗ್ರಾಮದ ಗ್ರಾಪಂ ಸದಸ್ಯ ಎ.ಬಿ.ಗಂಗಾಧರಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಹಳ ವರ್ಷಗಳ ನಂತರ ಕೆರೆ ಸಂಪೂರ್ಣ ಭರ್ತಿಯಾಗಿರುವುದರಿಂದ ಅರೇಹಳ್ಳಿ ಮತ್ತು ಕೂನಮುದ್ದನಹಳ್ಳಿ ಗ್ರಾಮಗಳ ಆಸುಪಾಸಿನಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದ್ದು ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಹೀಗಾಗಿ ಎರಡು ಗ್ರಾಮಗಳ ಗ್ರಾಮಸ್ಥರಲ್ಲಿ ಸಂಭ್ರಮವನ್ನುಂಟು ಮಾಡಿದೆ ಎಂದು ಹೇಳಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಸುಶೀಲಮ್ಮ ಶಿವರಾಮಯ್ಯ, ಸವಿತಾ ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಟಿ.ರಾಮಚಂದ್ರಯ್ಯ, ಗ್ರಾಮದ ಪ್ರಮುಖರಾದ ನಂಜಪ್ಪ, ಅರೇಹಳ್ಳಿ ಲಕ್ಷ್ಮೀನಾರಾಯಣ, ಎ.ವಿ.ಕೃಷ್ಣಮೂರ್ತಿ, ವೇದರಾಜು, ಎ.ಆರ್.ಮರಿಚಿಕ್ಕೇಗೌಡ, ಎ.ಎಸ್.ಚಂದ್ರಶೇಖರ, ಎ.ವಿ.ವೆಂಕಟಪ್ಪ, ಎ.ವಿ.ಆನಂದ್, ಗ್ರಾಪಂ ಮಾಜಿ ಸದಸ್ಯ ಸಿದ್ದೇಗೌಡ, ಪುಟ್ಟಸ್ವಾಮಿಗೌಡ, ಎ.ವಿ.ಮಾಯಣ್ಣ ಮತ್ತಿತರರು ಇದ್ದರು.