ರಾಮನಗರ: ತಾಲ್ಲೂಕಿನ ಬಿಡದಿ ರೈತರ ಸೇವಾ ಸಹಕಾರ ಸಂಘದ ವತಿಯಿಂದ 48 ಜನ ರೈತರಿಗೆ ತಲಾ ಒಂದು ಲಕ್ಷ ರೂ ಬೆಳೆ ಸಾಲವನ್ನು ವಿತರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಆರ್.ರೇಣುಕಾ ತಿಳಿಸಿದರು.
ಬಿಡದಿಯ ರೈತರ ಸೇವಾ ಸಹಕಾರ ಸಂಘದ ಕಾರ್ಯಾಲಯದಲ್ಲಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಿರಣ್ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 2020-25ನೇ ಸಾಲಿಗೆ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಸಂಘಕ್ಕೆ ಕಾನೂನಾತ್ಮಕವಾಗಿ ಸಿಇಒ ನೇಮಕಾತಿಯನ್ನು ಮಾಡಲಾಗಿದೆ. ಈ ಹಿಂದೆ ಕೊಟ್ಟ ಮಾತಿನಂತೆ ಬೆಳೆ ಸಾಲ 50 ಸಾವಿರದಿಂದ 1ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಹನುಮಂತಪ್ಪನವರ ಸೂಚನೆಯಂತೆ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ 48 ಜನ ರೈತರಿಗೆ ತಲಾ ಒಂದು ಲಕ್ಷ ರೂ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರೈತರ ಸೇವಾ ಸಹಕಾರ ಸಂಘವು ಬಸವನಪುರದ ಬಳಿ ಇರುವ ಗೋದಾಮಿಗೆ ಪ್ರತಿ ತಿಂಗಳು 50 ಸಾವಿರ ರೂ ಬಾಡಿಗೆ ಪಾವತಿಸುತ್ತಿದೆ. ಬಿಡದಿ ಆಸುಪಾಸಿನಲ್ಲಿ ಒಂದು ಎಕರೆ ಜಾಗ ಗುರುತಿಸಿಕೊಡುವಂತೆ ಶಾಸಕ ಎ.ಮಂಜುನಾಥ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಬಿಡದಿಯಲ್ಲಿ ಸುಮಾರು 40 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸಂಘದ ಕಚೇರಿ ಕಟ್ಟಡ ಬಹುತೇಕ ಶಿಥಿಲವಾಗಿದ್ದು ಹೊಸ ಕಟ್ಟಡ ನಿರ್ಮಾಣಕ್ಕೆ ಬಿಡಿಸಿಸಿ ಬ್ಯಾಂಕ್ ೧ ಕೋಟಿ ರೂ ಸಾಲ ನೀಡುವುದಾಗಿ ಭರವಸೆ ನೀಡಿದೆ. ಈ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಸಂಘಕ್ಕೆ ಆದಾಯದ ಮೂಲ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.