ರಾಮನಗರ: ಅನುಮಾನಾಸ್ಪದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ತಾಲ್ಲೂಕಿನ ಕಸಬಾ ಹೋಬಳಿ ಸಿಂಗ್ರಾಬೋವಿದೊಡ್ಡಿ ಸಮೀಪ ಹಾದು ಹೋಗಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಪತ್ತೆಯಾಗಿದ್ದು, ಅಪಘಾತವೋ ಅಥವಾ ಕೊಲೆಯೋ? ಎಂಬ ಸಂಶಯ ಮೂಡಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಸಿಕ್ಕಿರುವ ಶವವು ಸುಮಾರು 30 ವರ್ಷದ ವ್ಯಕ್ತಿಯ ಶವವಾಗಿದ್ದು, ಅಂಗಾತವಾಗಿ ಬಿದ್ದ ರೀತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಪರಿಚಿತ ವ್ಯಕ್ತಿಯ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಈತನನ್ನು ಯಾರಾದರೂ ಬೇರೆ ಕಡೆ ಕೊಲೆ ಮಾಡಿ ಹೆದ್ದಾರಿಯಲ್ಲಿ ತಂದು ಬಿಸಾಡಿ ಹೋಗಿದ್ದಾರೆಯೇ? ಅಥವಾ ಎಕ್ಸ್ಪ್ರೆಸ್ ಹೈವೆಯಲ್ಲಿ ಯಾವುದಾದರೂ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿರಬಹುದೇ? ಎಂಬಿತ್ಯಾದಿ ಅನುಮಾನಗಳು ಮೂಡಿವೆ.
ಹೆದ್ದಾರಿಯಲ್ಲಿ ವ್ಯಕ್ತಿಯ ಮೃತದೇಹವನ್ನು ಕಂಡ ಡಿಬಿಎಲ್ ಸಂಸ್ಥೆಯ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ದೂರು ನೀಡಲು ಯಾರೂ ಬಾರದಿರುವ ಕಾರಣ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಗೆ ಯಾವುದೋ ವಾಹನ ಡಿಕ್ಕಿ ಹೊಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಪೊಲೀಸರ ತನಿಖೆಯಿಂದ ನಿಜಾಂಶ ಹೊರ ಬರಬೇಕಿದೆ. ವ್ಯಕ್ತಿಯ ಮೃತ ದೇಹವನ್ನು ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ನಗರದ ಸಂಚಾರ ವಿಭಾಗದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.