ರಾಮನಗರ: ಜಿಲ್ಲೆಯಲ್ಲಿ ಹನುಮ ಜಯಂತಿಯನ್ನು ಭಕ್ತರು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಇದೇ ವೇಳೆ ವಿವಿಧ ದೇವಾಲಯಗಳಲ್ಲಿ ಹೋಮ, ಹವನ, ಅಭಿಷೇಕ, ಅಲಂಕಾರ, ವಿಶೇಷ ಪೂಜೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.
ನಗರದ ಶ್ರೀರಾಮ ದೇವರ ಬೆಟ್ಟದ ರಸ್ತೆಯ ಪ್ರವೇಶದ್ವಾರದಲ್ಲಿರುವ ಬೃಹತ್ ಆಭಯ ಆಂಜನೇಯಸ್ವಾಮಿ ಪ್ರತಿಮೆ ಮತ್ತು ಹನುಮನ ದೇಗುಲ, ಐಜೂರಿನ ಪಂಚಮುಖಿ ಆಂಜನೇಯಸ್ವಾಮಿ ದೇಗುಲ, ಅಗ್ರಹಾರದಲ್ಲಿರುವ ಅಭಯ ಆಂಜನೇಯ ಸ್ವಾಮಿ ದೇವಾಲಯ, ತಾಲ್ಲೂಕಿನ ಪೇಟೆ ಕುರುಬರಹಳ್ಳಿಯಲ್ಲಿನ 16 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ದೇಗುಲ, ಸಂಗಬಸವನದೊಡ್ಡಿಯ ಸಂಜೀವ ವರದಾಂಜನೇಯಸ್ವಾಮಿ ದೇವಾಲಯ, ಬಿಡದಿಯ ಮುತ್ತುರಾಯಸ್ವಾಮಿ ದೇಗುಲ, ಬಾರೇದೊಡ್ಡಿಯ ಶ್ರೀ ಬಾಲಾಂಜನೇಯಸ್ವಾಮಿ ದೇವಾಲಯ, ಮಂಚನಾಯ್ಕನಹಳ್ಳಿಯ ಪ್ರಸಿದ್ಧ ಕೋತಿ ಆಂಜನೇಯಸ್ವಾಮಿ ದೇವಾಲಯ. ಕೆಂಗಲ್ ಆಂಜನೇಯ ಸ್ವಾಮಿ ದೇಗುಲ ಸೇರಿದಂತೆ ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲೂಕಿನ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿ ಆಚರಣೆಯ ಪ್ರಯುಕ್ತ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಸ್ತಿಕರು ತಮ್ಮ ಕುಟುಂಬ ಸಮೇತ ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ಭೇಟಿ ಕೊಟ್ಟು ತಮ್ಮ ಭಕ್ತಿಭಾವ ಸಮರ್ಪಿಸಿಕೊಂಡರು.
ಜಿಲ್ಲಾ ಕೇಂದ್ರದಲ್ಲಿನ ಅಗ್ರಹಾರದಲ್ಲಿ ವ್ಯಾಸರಾಯರು ಸ್ಥಾಪಿಸಿದ ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಹೋಮ, ಅಭಿಷೇಕ, ಅಲಂಕಾರ, ಪ್ರಸಾದ ವಿನಿಯೋಗ ಮುಂತಾದ ಸೇವೆಗಳು ಯಶಸ್ವಿಯಾಗಿ ನೆರೆವೇರಿದವು. ಸೋಮವಾರ ಮುಂಜಾನೆ ಸುಪ್ರಭಾತ ಸೇವೆಯ ನಂತರ ಅನೇಕ ಧಾರ್ಮಿಕ ಕೈಂಕರ್ಯಗಳು, ಹೋಮ, ಹವನಗಳು ಅರ್ಪಣೆಯಾದವು. ಮಧ್ಯಾಹ್ನ ನೂರಾರು ಭಕ್ತರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ಹನುಮನ ದರ್ಶನ ಪಡೆದುಕೊಂಡರು.