ರಾಮನಗರ: ತಾಲ್ಲೂಕಿನ ಬಿಡದಿಯ ಶ್ರೀ ಬಸವೇಶ್ವರಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ನಡೆದ ಕನಕೋತ್ಸವ-2022ರ ಅಂಗವಾಗಿ ನಡೆದ ವಾಯ್ಸ್ ಆಫ್ ಕನಕೋತ್ಸವ, ಕನ್ನಡ ಚಿತ್ರಗೀತೆ, ಜಾನಪದ, ದೇಶಭಕ್ತಿ ಗೀತೆಗಳ ಸಮೂಹ ನೃತ್ಯ ಹಾಗೂ ರಂಗಗೀತೆಗಳ ಸ್ಪರ್ಧೆ ನೆರೆದವರ ಮನರಂಜಿಸಿದವು.
ಜಿಟಿಜಿಟಿ ಮಳೆಯ ನಡುವೆ ಆರಂಭಗೊಂಡ ಹೋಬಳಿ ಮಟ್ಟದ ಕನಕೋತ್ಸವಕ್ಕೆ ಸರಿಗಮಪ ಖ್ಯಾತಿಯ ಬಾಲಕಿ ಜ್ಞಾನ ಗುರುರಾಜ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಚಾಲನೆ ನೀಡಿದರು. ಡಿ.ಕೆ.ಎಸ್ ಚಾರಿಟಬಲ್ ಇನ್ಸ್ಸ್ಟಿಟ್ಯೂಟ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನಕೋತ್ಸವ ಕಾರ್ಯಕ್ರಮಕ್ಕೆ ಬಿಡದಿ ಹೋಬಳಿಯ 5ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಂದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂಎಲ್ಸಿ ಸಿ.ಎಂ.ಲಿಂಗಪ್ಪ ಅವರು ಮಾತನಾಡಿ, ಕಲೆ, ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಮಕ್ಕಳು ಎಂದೂ ಹಿಂದೆ ಬಿದ್ದಿಲ್ಲ. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಒಂದು ಹೆಜ್ಜೆ ಮುಂದಡಿ ಇಡುವ ಚಾತಿಯನ್ನು ಹೊಂದಿದ್ದಾರೆ. ಅಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸಲುವಾಗಿ ಕನಕೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕನಕೋತ್ಸವ ಅತ್ಯುತ್ತಮ ವೇದಿಕೆಯಾಗಿದೆ. ಡಿ.ಕೆ.ಎಸ್ ಚಾರಿಟಬಲ್ ಇನ್ಸ್ಸ್ಟಿಟ್ಯೂಟ್ ಟ್ರಸ್ಟ್ ಹಾಗೂ ಕಾಂಗ್ರೆಸ್ ಪಕ್ಷದ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ಆಕರ್ಷಕ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಸಮಾಜದಲ್ಲಿ ಎಲೆಮರೆಯ ಕಾಯಿಯಂತಿರುವ ಸ್ಥಳೀಯ ಪ್ರತಿಭೆಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಾಜಮುಖಿಗೆ ಬರಬೇಕು ಎಂದು ಕಿವಿಮಾತು ಹೇಳಿದರು.
ಹೋಬಳಿ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರು ಡಿ.17 ಮತ್ತು 18 ರಂದು ಮಾಗಡಿಯಲ್ಲಿ ನಡೆಯಲಿರುವ ತಾಲ್ಲೂಕು ಮಟ್ಟದ ಸ್ಪರ್ಧೆಗೆ ಅರ್ಹರಾಗುತ್ತಾರೆ. ನಂತರ ಕನಕಪುರದಲ್ಲಿ ಅಂತಿಮವಾಗಿ ಜಿಲ್ಲಾ ಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು ಅವರು ಸ್ವಾಗತಿಸಿ ನಿರೂಪಿಸಿದರು. ಬಿಡದಿ ಪುರಸಭೆ ಸದಸ್ಯರಾದ ಸಿ.ಉಮೇಶ್, ಹೊಂಬಯ್ಯ, ನವೀನ್, ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷ ಸತೀಶ್ಕುಮಾರ್, ಪ್ರಮುಖರಾದ ಹರೀಶ್ ಪಟೇಲ್, ಹೊಸೂರು ರಾಜಣ್ಣ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ದೀಪ ಮುನಿರಾಜು, ದಿಶಾ ಸಮಿತಿ ಸದಸ್ಯೆ ಕಾವ್ಯ, ಶಾಲೆಯ ಮುಖ್ಯ ಶಿಕ್ಷಕರಾದ ಸದಾಶಿವಂ, ಪಾರ್ವತಿ, ಸಂಯೋಜಕ ಗಿರೀಶ್, ಮುಖಂಡರಾದ ರೇಣುಕಯ್ಯ. ಅಬ್ಬನಕುಪ್ಪೆ ರಮೇಶ್, ಬಾಲಾಜಿ, ಪುಟ್ಟಸ್ವಾಮಿ, ಕಾಕರಾಮನಹಳ್ಳಿ ಹೇಮಂತ್ ಮುಂತಾದವರು ಭಾಗವಹಿಸಿದ್ದರು.