ರಾಮನಗರ: ಮೀನು ಕೃಷಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಯ್ದ ಕೆರೆಗಳಿಗೆ ಗ್ರಾಪಂ ವತಿಯಿಂದ ಮೀನು ಮರಿಗಳನ್ನು ಬಿಟ್ಟು ಸಾಕಣೆ ಮಾಡಲಾಗುವುದು ಎಂದು ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷ ವಿ.ಸತೀಶ್ಕುಮಾರ್ ತಿಳಿಸಿದರು.
ಜಿಲ್ಲೆಯ ಆಯ್ದ ಕೆರೆಗಳಿಗೆ ಉಚಿತ ಮೀನು ಮರಿ ದಾಸ್ತಾನು ಮಾಡುವ ಯೋಜನೆ ಅಂಗವಾಗಿ ಜಿಲ್ಲಾ ಮೀನುಗಾರಿಕೆ ಇಲಾಖೆ ವತಿಯಿಂದ ಬಿಡದಿ ಹೋಬಳಿ ಮಂಚನಾಯ್ಕನಹಳ್ಳಿ ಗ್ರಾಪಂ ವ್ಯಾಪ್ತಿಯ ಶ್ಯಾನುಮಂಗಲ ಕೆರೆಗೆ ಮೀನು ಮರಿ ದಾಸ್ತಾನು ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೀನು ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗ್ರಾಮೀಣ ಭಾಗದಲ್ಲಿ ಮೀನು ಕೃಷಿ ಅಭಿವೃದ್ಧಿಗೆ ಮುಂದಾಗಿದೆ. ಆಯ್ದ ಕೆರೆಗಳಿಗೆ ಉಚಿತವಾಗಿ ಮೀನು ಮರಿಗಳನ್ನು ಸಾಕಣೆಗೆ ಬಿಡುವ ಮೂಲಕ ಪಂಚಾಯಿತಿಗಳ ಆದಾಯದ ಮೂಲ ವೃದ್ಧಿಸುವ ಕೆಲಸವಾಗುತ್ತಿದೆ. ಆದರೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ತಲಾ ಒಂದು ಕೆರೆಯನ್ನು ಮಾತ್ರ ಆಯ್ಕೆ ಮಾಡಿಕೊಂಡಿರುವುದು ಸೂಕ್ತವಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಹರಾಜಾಗದೆ ಉಳಿದ ಎಲ್ಲಾ ಕೆರೆಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಅಭಿಪ್ರಾಯಪಟ್ಟರು.
ಶ್ಯಾನುಮಂಗಲ ಕೆರೆಗೆ ಇದೀಗ ಇಲಾಖೆ ವತಿಯಿಂದ 5ಸಾವಿರ ಮೀನು ಮರಿಗಳನ್ನು ಬಿಡಲಾಗಿದೆ. ಈ ಕೆರೆ ವಿಸ್ತೀರ್ಣ ದೊಡ್ಡದಾಗಿರುವುದರಿಂದ ಗ್ರಾಪಂ ವತಿಯಿಂದ ಹೆಚ್ಚುವರಿಯಾಗಿ 50 ಸಾವಿರ ಮೀನು ಮರಿಗಳನ್ನು ಸಾಕಣೆಗೆ ದಾಸ್ತಾನು ಮಾಡಲಾಗುವುದು. ಅಲ್ಲದೇ ಗ್ರಾಪಂ ವ್ಯಾಪ್ತಿಯಲ್ಲಿ ಹರಾಜಾಗದೆ ಉಳಿದ ಕೆರೆ-ಕಟ್ಟೆಗಳಿಗೂ ಮೀನು ಮರಿಗಳನ್ನು ಬಿಡುವ ಕಾರ್ಯ ಯೋಜನೆ ರೂಪಿಸಿ ಪಂಚಾಯ್ತಿಯಿಂದಲೇ ಉತ್ಪಾದನೆ ಮಾಡಿ ನಂತರ ಹರಾಜು ಪ್ರಕ್ರಿಯೆ ಕೆ‘ಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಜಯರಾಮಯ್ಯ ಮಾತನಾಡಿ, 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಆಯ್ದ ಗ್ರಾಪಂ ಕೆರೆಗಳಲ್ಲಿ ಮೀನು ಮರಿಗಳನ್ನು ಉಚಿತವಾಗಿ ದಾಸ್ತಾನು ಮಾಡಿ, ಮೀನು ಕೃಷಿಯನ್ನು ಅಭಿವೃದ್ಧಿ ಪಡಿಸುವ ಯೋಜನೆಗೆ ರಾಜ್ಯ ಸರಕಾರದ ಆಯವ್ಯಯದಲ್ಲಿ ಆಡಳಿತ ಅನುಮೋದನೆ ದೊರೆತಿದೆ. ಹೀಗಾಗಿ ಗ್ರಾಪಂಗಳಿಗೆ ಆದಾಯ ತರುವ ದೃಷ್ಠಿಯಿಂದ ಹಾಗೂ ಬಲಪಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಆಯ್ದ ಕೆರೆಗಳಿಗೆ ಬಲಿತ ಬಿತ್ತನೆ ಮೀನುಗಳನ್ನು ಜಲ ವಿಸ್ತೀರ್ಣಕ್ಕನುಗುಣವಾಗಿ ಗರಿಷ್ಠ ೧೦ ಸಾವಿರ ರೂಗಳ ದಾಸ್ತಾನು ಮಾಡಲಾಗುತ್ತಿದೆ ಎಂದರು.
ಒಳನಾಡು ಮೀನು ಉತ್ಪಾದನೆ ಹೆಚ್ಚಿಸಲು ಜಿಲ್ಲೆಯಲ್ಲಿ ಒಟ್ಟು ಆಯ್ದ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಈ ಪೈಕಿ ರಾಮನಗರ ತಾಲ್ಲೂಕಿನ 11 ಗ್ರಾಪಂಗಳ ವ್ಯಾಪ್ತಿಯ ಕೆರೆಗಳು ಸೇರಿವೆ. ಕಂಚುಗಾರನಹಳ್ಳಿ, ಭೈರಮಂಗಲ, ಗೋಪಹಳ್ಳಿ, ಬನ್ನಿಕುಪ್ಪೆ(ಬಿ), ಮಂಚನಾಯ್ಕನಹಳ್ಳಿ, ಮಾಯಗಾನಹಳ್ಳಿ, ಹುಣಸನಹಳ್ಳಿ, ಕೈಲಾಂಚ, ಹುಲಿಕೆರೆ-ಗುನ್ನೂರು, ಬನ್ನಿಕುಪ್ಪೆ(ಕೈ) ಹಾಗೂ ವಿಭೂತಿಕೆರೆ ಸೇರಿದಂತೆ ಒಟ್ಟು 17 ಗ್ರಾಪಂಗಳ ವ್ಯಾಪ್ತಿಯಲ್ಲಿ ತಲಾ ಒಂದೊಂದು ಕೆರೆಗಳು ಈ ಯೋಜನೆಗೆ ಒಳಪಟ್ಟಿವೆ ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಶೇಷಪ್ಪ, ಸ್ಥಳೀಯ ಸದಸ್ಯೆ ಮಂಜುಳಾ ರಂಗಸ್ವಾಮಿ, ಮೀನುಗಾರಿಕೆ ಇಲಾಖೆ ತಾಲ್ಲೂಕು ಅಧಿಕಾರಿ ಮಹಂತೇಶ್, ನೀರುಗಂಟಿಗಳಾದ ಶ್ರೀನಿವಾಸ್, ಪುಟ್ಟನರಸಯ್ಯ, ಹರೀಶ್ ಮುಂತಾದವರು ಉಪಸ್ಥಿತರಿದ್ದರು.