ರಾಮನಗರ: ಸೋಂಪುರದ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕಡಲೆಕಾಯಿ ಪರಿಷೆ ಪ್ರಯುಕ್ತ ಇದೇ ಜ.14 ಮತ್ತು 15ರಂದು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಮೇಚೂರ್ ಕುಸ್ತಿ ಸಂಘದ ಅಧ್ಯಕ್ಷ ಡಿ.ಎಸ್.ಸತೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಕುಸ್ತಿ ಸಂಘದ ಆಶ್ರಯದಲ್ಲಿ ಜಿಲ್ಲಾ ಅಮೇಚೂರ್ ಕುಸ್ತಿ ಸಂಘ, ಕಾಳಮ್ಮ ಮಲ್ಲೇಶಯ್ಯ ಫೌಂಡೇಶನ್ ಹಾಗೂ ಸೋಂಪುರದ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಕುಸ್ತಿ ಪಂದ್ಯಾವಳಿಯಲ್ಲಿ ಮ್ಯಾಟ್ ಬಳಕೆ ಮಾಡದೆ ಮಣ್ಣಿನ ಕೋರ್ಟ್ನಲ್ಲಿ ನಡೆಯಲಿದೆ. ಸುಮಾರು 300 ರಿಂದ 400 ಜನ ಪೈಲ್ವಾನರು ಪಂದ್ಯಾವಳೀಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪುರುಷರ ವಿಭಾಗದಲ್ಲಿ ಶ್ರೀ ಕರ್ನಾಟಕ ಕಿಶೋರ, ಶ್ರೀ ಕರ್ನಾಟಕ ಕುಮಾರ, ಶ್ರೀ ಕರ್ನಾಟಕ ಕೇಸರಿ, ಶ್ರೀ ಕರ್ನಾಟಕ ಕಂಠೀರವ ಮಹಿಳೆಯರ ವಿಭಾಗದಲ್ಲಿ ಶ್ರೀ ಕರ್ನಾಟಕ ಕಿಶೋರಿ, ಶ್ರೀ ಕರ್ನಾಟಕ ಕುಮಾರಿ, ಬಾಲಕರ ವಿಭಾಗದಲ್ಲಿ ಶ್ರೀ ಕರ್ನಾಟಕ ಬಾಲ ಕುಮಾರ ಪ್ರಶಸ್ತಿ, ಶ್ರೀ ಕರ್ನಾಟಕ ಬಾಲ ಕೇಸರಿ ಪ್ರಶಸ್ತಿ, ಕಂಠೀರವ ಪ್ರಶಸ್ತಿಗಳು.
ಬಾಲಕಿಯರ ವಿಭಾಗದಲ್ಲಿ ಶ್ರೀ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ಶ್ರೀ ಒನಕೆ ಓಬವ್ವ ಪ್ರಶಸ್ತಿ, ಕಿರಿಯರ ಬಾಲಕರ ವಿಭಾಗದಲ್ಲಿ ಶ್ರೀ ಮಶಯ್ಯ ಪ್ರಶಸ್ತಿ, ಕಿರಿಯರ ಬಾಲಕಿಯರ ವಿಭಾಗದಲ್ಲಿ ಶ್ರೀ ಕಾಳಮ್ಮ ಪ್ರಶಸ್ತಿ, ರಾಮನಗರ ಜಿಲ್ಲಾ ಮಟ್ಟದ ವಿಭಾಗದಲ್ಲಿ ಶ್ರೀ ರಾಮನಗರ ಕೇಸರಿ ಮತ್ತು ಶ್ರೀ ರಾಮನಗರ ಮಹಿಳಾ ಕೇಸರಿ ಪ್ರಶಸ್ತಿಯೊಂದಿಗೆ ಬೆಳ್ಳಿ ಗದೆ ಹಾಗೂ ನಗದು ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಅಮೇಚೂರ್ ಕುಸ್ತಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್.ವಿಜಯಕುಮಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕುಸ್ತಿ ಪರಂಪರೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ವಿಜೇತ ಪಟುಗಳಿಗೆ 6 ಲಕ್ಷ ರೂ ಮೊತ್ತದ ಬಹುಮಾನ ಮತ್ತು ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದೆ. ದಸರಾ ಕ್ರೀಡಾಕೂಟದಲ್ಲಿ ಕೊಡುತ್ತಿದ್ದ ಕರ್ನಾಟಕ ಕಂಠೀರವ ಪ್ರಶಸ್ತಿಯನ್ನು ಈ ಬಾರಿ ಅಮೇಚೂರ್ ಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕೆಆರ್ಐಡಿಎಲ್ ಅಧ್ಯಕ್ಷರೂ ಆದ ಅಮೇಚೂರ್ ಕುಸ್ತಿ ಸಂಘದ ಗೌರವಾಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ನಶಿಸಿಹೋಗುತ್ತಿರುವ ಗ್ರಾಮೀಣ ಸೊಬಗಿನ ಕಬಡ್ಡಿ, ಕುಸ್ತಿ ಹಾಗೂ ಖೋ ಖೋ ಆಟಗಳನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ. ಕುಸ್ತಿ ಪಂದ್ಯಾವಳಿಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಬಸವೇಶ್ವರಸ್ವಾಮಿ ದೇಗುಲಕ್ಕೆ ಮರದ ರಥವನ್ನು ಸಮರ್ಪಿಸಲಿದ್ದಾರೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಕುಸ್ತಿ ಸ್ಪರ್ಧೆಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಆಯ್ಕೆಯಾಗಿರುವ ರಾಮನಗರ ಜಿಲ್ಲೆಯ ಕುಸ್ತಿ ಪಟುಗಳಾದ ಪೈಲ್ವಾನ್ ಮನೋಜ್, ಪೈಲ್ವಾನ್ ಜಯಂತ್, ಪೈಲ್ವಾನ್ ನವೀನ್ ಕುಮಾರ್, ಪೈಲ್ವಾನ್ ಅಪ್ಪಾಜಿ, ಶಾದಾಬ್ ಅಹಮದ್ ಖಾನ್, ಪೈಲ್ವಾನ್ ದರ್ಶನ್ ಅವರುಗಳನ್ನು ಅಭಿನಂದಿಸಲಾಯಿತು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ರಮೇಶ್, ಜಿಲ್ಲಾ ಅಮೆಚೂರ್ ಕಸ್ತಿ ಸಂಘದ ಉಪಾಧ್ಯಕ್ಷ ಮರಿಯಣ್ಣ, ಕೆ.ಆರ್. ಸುರೇಶ್, ಸಂಘಟನಾ ಕಾರ್ಯದರ್ಶಿ ಕೆ.ಶಿವರಾಜು, ಜಂಟಿ ಕಾರ್ಯದರ್ಶಿ ಮಣಿಕಂಠ, ಖಜಾಂಚಿ ಸಿದ್ದಮಾದಯ್ಯ, ನಿರ್ದೇಶಕರಾದ ರಮೇಶ್, ರಾಜು, ಮುತ್ತುರಾಜು ಗೌರಿಶಂಕರ್, ಅನಿಲ್ ಕುಮಾರ್, ನವೀನ್ ಕುಮಾರ್, ಕುಮಾರಸ್ವಾಮಿ, ದೇವರಾಜು, ಸ್ವಾಮಿ, ಸಲಹೆಗಾರ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.