ಶಿವಮೊಗ್ಗ: ಮೈಸೂರಿನ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಮತ್ತು ಆರ್ ಎಸ್ ಎಸ್ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನವರ ಹೇಳಿಕೆ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಗರಂ ಆಗಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವರು ಮೈಸೂರಿನ ಸ್ಯಾಂಟ್ರೋ ರವಿ ಪ್ರಕರಣದ ವಿಚಾರದಲ್ಲಿ, ಆತನನ್ನು ಬಂಧಿಸಿ ಆತನ ಮೇಲಿರುವ ಎಲ್ಲಾ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಲು ಮೈಸೂರು ಕಮಿಷನರಿಗೆ ತಿಳಿಸಿದ್ದೇನೆ ಎಂದರು.
ಸ್ಯಾಂಟ್ರೋ ರವಿಯ ಹಿನ್ನೆಲೆ ಆತನ ಮೇಲೆ ಯಾರಾದರೂ ದೂರು ಕೊಟ್ಟಿದ್ದರೆ, ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಸ್ಯಾಂಟ್ರೋ ರವಿಯ ಮೇಲೆ ಈ ಹಿಂದೆ ಗುಂಡಾ ಕಾಯ್ದೆ ದಾಖಲು ಮಾಡಲಾಗಿತ್ತು. ಈಗ ತಕ್ಷಣ ಆತನನ್ನು ಬಂಧಿಸಿ ಕ್ರಮ ಜರುಗಿಸಲು ಮೈಸೂರು ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.
ಕುಮಾರ ಕೃಪ ಅತಿಥಿ ಗೃಹದಲ್ಲಿ ಸ್ಯಾಂಟ್ರೋ ರವಿಗೆ ಬಿಸಿ ಪಾಟೀಲರು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಎಚ್ ಡಿ ಕೆ ಆರೋಪದ ವಿಚಾರದ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರ, ಸ್ಯಾಂಟ್ರೋ ರವಿ ಕಳೆದ 20 ವರ್ಷಗಳಿಂದ ಹಲವು ರಾಜಕಾರಣಿಗಳ ಜೊತೆ ಸಂಬಂಧ ಇಟ್ಟುಕೊಂಡಿದ್ದ ಎಂಬ ಮಾಹಿತಿ ಇದೆ. ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆಗೂ ಸ್ಯಾಂಟ್ರೋ ರವಿಯದು ಯಾವ ರೀತಿ ಸಂಬಂಧ ಇಟ್ಟುಕೊಂಡಿದ್ದ ಎಂಬುದರ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಹೇಳಿದರು.
ಎಚ್ಡಿಕೆಗೆ ಮಾತ್ರ ಆಡಿಯೋ ಫೋಟೋ ಹೇಗೆ ಸಿಗುತ್ತದೆ ಎಂಬ ಬಗ್ಗೆ ಯೋಚಿಸಬೇಕಿದೆ. ಸ್ಯಾಂಟ್ರೋ ರವಿಯ ವಿರುದ್ಧದ ತನಿಖೆಗೆ ಹೆಚ್ಡಿಕೆ ಅಗತ್ಯ ಮಾಹಿತಿ ನೀಡಿ ಸಹಕರಿಸಲಿ. ಸ್ಯಾಂಟ್ರೋ ರವಿಯ ಅಪರಾಧ ತನಿಖೆಯಲ್ಲಿ ಸಾಬೀತಾದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಂಪುಟ ವಿಸ್ತರಣೆ ವಿಚಾರ ನನಗೆ ಯಾವ ಮಾಹಿತಿ ಗೊತ್ತಿಲ್ಲ ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಆದರೆ ಮಾಜಿ ಸಿಎಂ ಬಿಎಸ್ ವೈ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಈ ಬಗ್ಗೆ ಬಿಎಸ್ ವೈ ಪ್ರತಿಕ್ರಿಯಿಸಿದ್ದರೆ, ಅದು ಅವರಿಗೆ ಬಿಟ್ಟ ವಿಚಾರವಾಗಿದೆ. ಅವರು ಹಿರಿಯರು ಅವರಿಗೆ ಮಾಹಿತಿ ಇರಬಹುದು ಎಂದರು.
ಮುರುಗೇಶ್ ನಿರಾಣಿ ಮತ್ತು ಯತ್ನಾಳ್ ಸಿಡಿ ವಿಚಾರದ ವಾಗ್ದಾಳಿ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಪ್ರತಿಕ್ರಿಯೆ ನೀಡಲ್ಲವೆಂದಷ್ಟೇ ಹೇಳಿದರು.
ಆರ್ ಎಸ್ ಎಸ್ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆನೂ ಪ್ರತಿಕ್ರಿಯಿಸಿದ ಗೃಹ ಸಚಿವರು, ಮಾಜಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ರಾಜಕಾರಣದ ಗೌರವವನ್ನ ಕಡಿಮೆ ಮಾಡುತ್ತಿದ್ದಾರೆ. ಯಾವುದಕ್ಕೂ ಬೆಲೆ ಇಲ್ಲದಂತೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿಎಂ ಆಗಿದ್ದ ವ್ಯಕ್ತಿ ಕೀಳು ಮಟ್ಟದ ರಾಜಕಾರಣಕ್ಕೆ ಇಳಿಯುತ್ತಿದ್ದಾರೆ. ಇದನ್ನು ಜನ ಯೋಚನೆ ಮಾಡಬೇಕಿದೆ ಎಂದರು.
ಯಾವ ರೀತಿ ಮಾತನಾಡಬೇಕು ಎಂಬ ಸಂಸ್ಕೃತಿಯೇ ಇಲ್ಲದ ವ್ಯಕ್ತಿ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುವುದು ಅಲ್ಪಸಂಖ್ಯಾತರ ವೋಟನ್ನ ಗಿಂಜೋದಕ್ಕಾಗಿ ಎಂದು ಬಣ್ಣಿಸಿದರು.ಆರ್ ಎಸ್ ಎಸ್ ಮತ್ತು ಬಿಜೆಪಿಗೆ ತೆಗಳಿದರೆ ಒಂದು ಕೋಮಿನ ವೋಟು ಭದ್ರವಾಗಲಿದೆ ಎಂಬ ಮನೋಭಾವನೆ ಅವರಲ್ಲಿ ಹಾಗಾಗಿ ಆರ್ ಎಸ್ ಎಸ್ ವಿರುದ್ಧ ಸಿದ್ದರಾಮಯ್ಯ ಆರೋಪಿಸಯತ್ತಾರೆ ಎಂದರು.
ತೀರ್ಥಹಳ್ಳಿಯಲ್ಲಿ ಭದ್ರಾ ಅಭಯಾರಣ್ಯದಿಂದ ಆನೆ ತೀರ್ಥಹಳ್ಳಿಗೆ ಬಂದಿದೆ ಇದನ್ನ ನಿಯಂತ್ರಣ ಮಾಡಲು ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹಸಚಿವರು ತಿಳಿಸಿದರು.
ಅರಣ್ಯ ವ್ಯಾಪ್ತಿಯಲ್ಲಿ ಆನೆಯನ್ನು ಹಿಡಿಯಲು ಕಷ್ಟವಿದ್ದು ಜಮೀನಿನ ಗದ್ದೆ ಪ್ರದೇಶಗಳಲ್ಲಿ ಆನೆ ಬಂದಾಗ ಹಿಡಿಯಲು ಸುಲಭವಾಗಿರುತ್ತದೆ. ಆನೆ ವಿಷಯದಲ್ಲಿ ಯಾರು ಆತಂಕ ಪಡಬೇಕಾಗಿಲ್ಲ ಎಂದರು.