ರಾಮನಗರ: ಮಾಜಿ ಉದ್ಯೋಗಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಫೈನಾನ್ಸ್ ಸಂಸ್ಥೆಯ ಸೇಫ್ ಲಾಕರ್ನಲ್ಲಿ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ನಂತರ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿರುವ ಘಟನೆ ಬಿಡದಿ ಪಟ್ಟಣದಲ್ಲಿ ಜರುಗಿದೆ.
ತಾಲೂಕಿನ ಬಿಡದಿ ಕೇತಗಾನಹಳ್ಳಿ ಬಡಾವಣೆಯಲ್ಲಿರುವ ಬಿ.ಎಸ್.ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ವಿಷ್ಟು ಎಂಬಾತ ಹಣ ಲಪಟಾಯಿಸಲು ಪ್ರಯತ್ನಿಸಿ ಸಿಕ್ಕಿಬಿದ್ದು ಬಂಧನಕ್ಕೊಳಗಾದ ಆರೋಪಿ.
ಬಿಡದಿ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿ ವಿಷ್ಣು ಕಳೆದ ಒಂದು ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟು ಹೋಗಿದ್ದನು. ಜ.27ರಂದು ಬೆಳಿಗ್ಗೆ 10.30ರ ಸಮಯದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಪುನೀತ್ ಅವರು ಮತ್ತೋರ್ವ ಉದ್ಯೋಗಿ ಅರ್ಜುನ್ ಜತೆಯಲ್ಲಿ ಬಂದು ಸಂಸ್ಥೆಯ ಬಾಗಿಲು ತೆರೆಯಲು ಮುಂದಾದಾಗ ಕಳ್ಳತನದ ಪ್ರಯತ್ನ ನಡೆದಿರುವುದು ಕಂಡುಬಂದಿದೆ.
ಮೈಕ್ರೋ ಫೈನಾನ್ಸ್ ಶಾಖಾ ಕಚೇರಿಯ ಡೋರ್ ಲಾಕ್ ತೆರೆಯಲು ಹೋದಾಗ ಅಲ್ಲಿದ್ದ ಸಿ.ಸಿ ಕ್ಯಾಮರಾ ಮೇಲ್ಭ್ಬಾಗಕ್ಕೆ ತಿರುಗಿರುವುದು ಅನುಮಾನ ಮೂಡಿಸಿತ್ತು. ತಕ್ಷಣವೇ ಕಚೇರಿಯ ಒಳ ಪ್ರವೇಶಿಸಿದ ಮ್ಯಾನೇಜರ್ ಪುನೀತ್ ಅವರು ಸಿ.ಸಿ.ಕ್ಯಾಮರಾ ಪರಿಶೀಲಿಸಿದ್ದಾರೆ. ಆರೋಪಿ ವಿಷ್ಣು ಸಂಸ್ಥೆಯ ಸೇಫ್ ಲಾಕರ್ ಕೀಲಿ ಉಪಯೋಗಿಸಿ ತೆಗೆಯಲು ಪ್ರಯತ್ನಿಸಿರುವುದು ಹಾಗೂ ಲಾಕರ್ ತೆರೆಯದಿದ್ದಾಗ ವಿಫಲನಾಗಿ ವಾಪಸ್ ತೆರಳಿರುವುದು ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ.
ಸೇಫ್ ಲಾಕರ್ ತೆರೆಯದ ಕಾರಣ ಹಣ ದೋಚಲು ಸಾಧ್ಯವಾಗಿಲ್ಲ. ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಅವರ ಸೂಚನೆ ಮೇರೆಗೆ ಪುನೀತ್ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯ ಬೆನ್ನತ್ತಿದ ಪೊಲೀಸರು ಚನ್ನಪಟ್ಟಣ ತಾಲೂಕಿನ ಗರಕಹಳ್ಳಿ ನಿವಾಸಿ ವಿಷ್ಣು ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.