ರಾಮನಗರ : ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಹಾವೇರಿ ರೈತ ವಿರೂಪಾಕ್ಷಪ್ಪ ಎಂಬುವರ ಮೇಲೆ ನಡೆದ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚಿಸಿದರು.
ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರೊಂದಿಗೆ ಶನಿವಾರ ದೂರವಾಣಿ ಮೂಲಕ ಚರ್ಚಿಸಿದ ಅವರು, ‘ದೂರದ ಊರಿನಿಂದ ಬಂದಿರುವ ರೈತನ ಮೇಲೆ ಇಲ್ಲಿನ ರೀಲರ್ ಹಲ್ಲೆಗೆ ಮುಂದಾಗಿದ್ದು ದುರಂತ. ಮಾರುಕಟ್ಟೆಯಲ್ಲಿ ರೈತರಿಗೆ ಸೂಕ್ತ ರಕ್ಷಣೆ ಇಲ್ಲ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿಬರುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ಬಿಗಿ ಕ್ರಮ ಕೈಗೊಳ್ಳಬೇಕು. ರೇಷ್ಮೆಗೂಡು ಹರಾಜು ನಡೆಯುವ ಅವಧಿಯಲ್ಲಿ ರೈತರಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.
‘ಮಾರುಕಟ್ಟೆಯಲ್ಲಿ ಹರಾಜು ನಡೆಯುವ ಸಂದರ್ಭದಲ್ಲಿ ರೇಷ್ಮೆಗೂಡನ್ನು ಬೇರ್ಪಡಿಸುವುದು, ಗೂಡನ್ನು ಕದಿಯುವ ಘಟನೆಗಳು ಆಗಿಂದ್ದಾಗ್ಗೆ ನಡೆಯುತ್ತಿರುವುದು ಬೇಸರದ ಸಂಗತಿ. ಮಧ್ಯವರ್ತಿಗಳಿಗೆ ಪ್ರವೇಶ ನೀಡಬಾರದು. ರೀಲರ್ಗಳ ಸಭೆ ಕರೆದು ಈ ಬಗ್ಗೆ ಎಚ್ಚರಿಕೆ ನೀಡಬೇಕು’ ಎಂದು ಸೂಚಿಸಿದರು.
ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಹ ಟ್ವೀಟ್ ಮಾಡಿದ್ದು, ‘ಪ್ರಕರಣ ಬೆಳಕಿಗೆ ಬರುತ್ತಲೇ ಆರೋಪಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ರಾಮನಗರ ಜಿಲ್ಲಾ ಪೊಲೀಸರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ತ್ವರಿತವಾಗಿ ದೂರಿಗೆ ಸ್ಪಂದಿಸಿ ಕ್ರಮ ಕೈಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
ರೀಲರ್ ಪ್ರವೇಶಕ್ಕೆ ನಿರ್ಬಂಧ: ಇದೇ 12ರಂದು ಹಾವೇರಿ ಜಿಲ್ಲೆಯ ವಿರೂಪಾಕ್ಷಪ್ಪ ಎಂಬ ರೈತನ ಮೇಲೆ ಗೂಡು ಮಾರುಕಟ್ಟೆಯಲ್ಲಿ ರೀಲರ್ ಮುನೀರ್ ಅಹಮ್ಮದ್ ಎಂಬುವರು ಹಲ್ಲೆ ಯತ್ನ ನಡೆಸಿದ್ದು, ಆರೋಪಿ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿರೂಪಾಕ್ಷಪ್ಪ ತಂದಿದ್ದ ರೇಷ್ಮೆಗೂಡು ಆನ್ಲೈನ್ ಹರಾಜಿನಲ್ಲಿ ಪ್ರತಿ ಕೆ.ಜಿ.ಗೆ ₹550 ದರದಲ್ಲಿ ಮಾರಾಟ ಆಗಿತ್ತು. ಈ ಹರಾಜು ಪಡೆದಿದ್ದ ರೀಲರ್ ರೈತನ ಬಳಿ ಬಂದು ‘ನಾನು ತಪ್ಪಾಗಿ ಪ್ರತಿ ಕೆ.ಜಿ.ಗೆ ₹550 ದರ ನಮೂದು ಮಾಡಿದ್ದೇನೆ. ಪ್ರತಿ ಕೆ.ಜಿ.ಗೆ ₹100 ರಂತೆ ಹಣ ಕಡಿತ ಮಾಡಿ ಉಳಿದಿದ್ದನ್ನು ಕೊಡುತ್ತೇನೆ. ಹಾಗೆಯೇ ವೇಸ್ಟೇಜ್ ಲೆಕ್ಕದಲ್ಲಿ 4 ಕೆ.ಜಿ. ಗೂಡಿನ ಹಣ ಕೊಡುವುದಿಲ್ಲ’ ಎಂದಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿರೂಪಾಕ್ಷಪ್ಪ, ‘ಹಾಗೆ ಮಾಡಬೇಡಿ. ಬೇಕಿದ್ದರೆ ನಿಮ್ಮ ಹರಾಜು ಹಿಂಪಡೆಯಿರಿ’ ಎಂದು ರೀಲರ್ಗೆ ಕೈ ಮುಗಿದಿದ್ದರು. ಈ ಸಂದರ್ಭ ರೀಲರ್ ಮತ್ತವರ ಬೆಂಬಲಿಗರು ವಿರೂಪಾಕ್ಷಪ್ಪ ಅವರನ್ನು ನಿಂದಿಸಿ, ಹಲ್ಲೆಗೂ ಯತ್ನಿಸಿದ್ದರು ಎಂದು ದೂರಲಾಗಿದೆ.
ರೇಷ್ಮೆಗೂಡು ಮಾರುಕಟ್ಟೆ ಉಪ ನಿರ್ದೇಶಕ ಮಾರಪ್ಪ ಬೀರಲದಿನ್ನಿ ಹಾಗೂ ರೈತ ವಿರೂಪಾಕ್ಷಪ್ಪ ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆರೋಪಿ ರೀಲರ್ ಅನ್ನು ಸದ್ಯ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ನಿಷೇಧಿಸಲಾಗಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ತಿಳಿಸಿದರು.