ಬೆಂಗಳೂರು: ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಐತಿಹಾಸಿಕ, ಸುಪ್ರಸಿದ್ದ ಕರಗವು ಏಪ್ರಿಲ್ 15ರಿಂದ 25ರವರೆಗೆ ನಡೆಯಲಿದೆ. ತಿಗಳರಪೇಟೆಯಲ್ಲಿನ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 25ರವರೆಗೆ ನಡೆಯುವ ಜಾತ್ರಾ ಮಹೋತ್ಸವವು ಲಕ್ಷಾಂತರ ಜನರನ್ನು ಆಕರ್ಷಿಸಲಿದೆ.
ಕರಗ ಕರ್ನಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದೆ. ಈ ಸಂಧರ್ಭದಲ್ಲಿ ಆದಿಶಕ್ತಿ ಶ್ರೀ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ಜನಾಂಗದವರು ಕುಲದೇವತೆಯಾಗಿ ಆರಾಧಿಸುತ್ತಾರೆ. ಶತಮಾನಗಳ ಇತಿಹಾಸವನ್ನೇ ಹೊಂದಿರುವ ವಿಶ್ವಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಆದಿಶಕ್ತಿಯನ್ನು ಆರಾಧಿಸುವ ಹಲವಾರು ಪ್ರಮುಖ ಉತ್ಸವಗಳಲ್ಲಿ ಕರಗ ಮಹೋತ್ಸವವೂ ಒಂದು. ಈ ಕರಗ ಎನ್ನುವ ಪದವು ವಿಶೇಷ ಅರ್ಥವನ್ನು ಹೊಂದಿದೆ. ಕರಗ ಎಂದರೆ ಅಕ್ಷರಶಃ ‘ಕುಂಭ’ ಎಂಬುದಾಗಿದೆ. ಕರಗ ಎನ್ನುವ ಪದದಲ್ಲಿನ ಒಂದೊಂದು ಶಬ್ಧವು ವಿವಿಧ ಬಗೆಯ ಅರ್ಥವನ್ನು ನೀಡುತ್ತದೆ. ಕರಗ ದಲ್ಲಿ ಕ ಎಂದರೆ ಕೈಯಿಂದ ಮುಟ್ಟದ, ರ ಎಂದರೆ ರುಂಡದ ಮೇಲೆ ಧರಿಸುವ, ಗ ಎಂದರೆ ತಿರುಗುವುದು ಎಂಬರ್ಥವನ್ನು ನೀಡುತ್ತದೆ.
ಬೆಂಗಳೂರಿನಲ್ಲಿ ತಿಗಳರ ಪೇಟೆಯಲ್ಲಿ ದ್ರೌಪದಿ ಹಾಗೂ ಧರ್ಮರಾಯ ಸ್ವಾಮಿ ದೇಗುಲವಿದೆ. ಈ ದೇವಾಲಯದಲ್ಲೇ ಕರಗ ಉತ್ಸವಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಚಟುವಟಿಕೆಗಳು ನಡೆಯುತ್ತದೆ. ಕರಗ ಹಬ್ಬದ ಆಚರಣೆಯು ಹಿಂದೂ ವರ್ಷದ ಮೊದಲ ತಿಂಗಳ ಸಪ್ತಮಿಯಿಂದ ಆರಂಭವಾಗಿ ಸುಮಾರು 11 ದಿನಗಳ ಕಾಲ ನಡೆಯುತ್ತದೆ. ಈ 11 ದಿನಗಳಲ್ಲಿ 3 ದಿನಗಳ ಕಾಲ ತಾಯಿ ದ್ರೌಪದಿ ತಮ್ಮೊಡನೆ ಇರುತ್ತಾಳೆಂದು ತಿಗಳರ ನಂಬಿಕೆ. ಈ ಆಚರಣೆಯಲ್ಲಿ ಈ ಉತ್ಸವದ ಆರಾಧನೆಯ ಸಂಪ್ರದಾಯವನ್ನು ನಡೆಸಿಕೊಂಡು ಬಂದಿರುವವರು ತಿಗಳರು ಎಂದು ಕರೆಯಲ್ಪಡುವ ವಹ್ನಿಕುಲ ಕ್ಷತ್ರಿಯರು ಕಳಸ ಹೊತ್ತು ನೃತ್ಯ ಮಾಡುತ್ತಾ ದೇವರಿಗೆ ಹರಕೆಯನ್ನು ಒಪ್ಪಿಸುತ್ತಾರೆ. ನಂಬಿಕೆಯ ಪ್ರಕಾರ, ಅವರು ತಲೆಯ ಮೇಲೆ ಹೊತ್ತಿರುವ ಕರಗ ಎನ್ನುವ ಕಲಶ ತಪ್ಪಿಯೂ ಕೂಡ ನೆಲಕ್ಕೆ ಬೀಳಬಾರದು.
ಕರಗ ಆಚರಣೆಯ ಇತಿಹಾಸ:
ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಛೆತಪ್ಪಿ ಬೀಳುತ್ತಾಳೆ. ದ್ರೌಪದಿ ಮೂರ್ಛಿತಳಾಗಿ ಬಿದ್ದದ್ದು ಪಾಂಡವರಿಗೆ ತಿಳಿಯದೆ ಮುಂದೆ ನಡೆಯುತ್ತಾರೆ. ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದನ್ನು ನೋಡುತ್ತಾಳೆ. ಆಗ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗೌಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಠಿ ಮಾಡುತ್ತಾಳೆ.
ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದಿರು ಹೋರಾಡಿ ಗೆಲ್ಲುತ್ತಾರೆ. ನಂತರ ದ್ರೌಪದಿ ಆದಿಶಕ್ತಿಯಾಗಿ ಭೂಮಿಗೆ ಮರಳಿ ಬಾರದಂತೆ ಕೈಲಾಸಕ್ಕೆ ಹೋಗಿ ನೆಲೆಸಲು ನಿರ್ಧರಿಸುತ್ತಾಳೆ. ತಾಯಿಯ ಅಗಲುವಿಕೆಯನ್ನು ನೆನೆದು ಆಕೆಯನ್ನು ಹೋಗದಂತೆ ಮಕ್ಕಳು ಬೇಡಿಕೊಳ್ಳುತ್ತಾರೆ. ಆಗ ಶ್ರೀಕೃಷ್ಣನು ಮಕ್ಕಳಿಗೆ ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ‘ಅಲಗುಸೇವೆ’ ಎನ್ನುತ್ತಾರೆ) “ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು” ಎಂದು ತಮ್ಮ ನೋವನ್ನು ತೋಡಿಕೊಳ್ಳಲು ಹೇಳುತ್ತಾನೆ. ಇದನ್ನು ನೋಡಿ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ಮೂರು ದಿನ ಭೂಮಿಗೆ ಬಂದು ಮಕ್ಕಳೊಂದಿಗೆ ಇರುವುದಾಗಿ ಭರವಸೆಯನ್ನು ನೀಡುತ್ತಾಳೆ. ಆ ಮೂರು ದಿನಗಳನ್ನೇ ಕರಗ ಎಂದು ಆಚರಿಸಲಾಗುತ್ತದೆ ಎಂದು ಕಥೆಯ ಪ್ರಕಾರ ಹೇಳಲಾಗುತ್ತದೆ.