ಬೆಂಗಳೂರು: ಭಾರತದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ “ಡಿಎಸ್-ಮ್ಯಾಕ್ಸ್” ಪ್ರಾಪರ್ಟೀಸ್ ಪೈ. ಲಿಮಿಟೆಡ್ ಸಂಸ್ಥೆಯಿಂದ ಕೊಡಮಾಡುವ ಪ್ರತಿಷ್ಠಿತ ಡಿ.ಎಸ್. ಮ್ಯಾಕ್ಸ್ ರತ್ನಶ್ರೀ ಗೆ ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ಕಿರಣ್ ಕುಮಾರ್, ಸಾಣೆ ಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ, ಪರಿಸರ ವಾದಿ ಪದ್ಮಶ್ರೀ ತುಳಸಿ ಗೌಡ ಸೇರಿ 11 ಮಂದಿ ಆಯ್ಕೆಯಾಗಿದ್ದು, ಇದೇ 19 ರಂದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಇವರಲ್ಲದೇ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್, ಸಾಲುಮರದ ತಿಮ್ಮಕ್ಕ, ರಂಗ ಭೂಮಿ ಕಲಾವಿದೆ ಬಿ. ಮಂಜಮ್ಮ ಜೋಗತಿ, ಕವಿ, ಗೀತೆ ರಚನೆಗಾರ ಡಾ. ದೊಡ್ಡರಂಗೇಗೌಡ, ಜಾಗತಿಕ ಪ್ಯಾರಾ ಅಥ್ಲೀಟ್ ಮಾಲತಿ ಹೊಳ್ಳ ಕೃಷ್ಣಮೂರ್ತಿ ಹಾಗೂ ರಾಷ್ಟ್ರೀಯ ಮಹಿಳಾ ಸಾಧಕಿ ಸಬಿತಾ ಮೋನಿಸ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಡಿಎಸ್-ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿಗೆ ಹಿರಿಯ ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಖ್ಯಾತ ಸಾಹಿತಿ, ನಟ, ನಿರ್ದೇಶಕ ತಣಿಕೆಲ್ಲ ಭರಣಿ ಆಯ್ಕೆಯಾಗಿದ್ದು, ಈ ಎಲ್ಲಾ ಪ್ರಶಸ್ತಿಗಳು 25 ಸಾವಿರ ರೂಪಾಯಿ ನಗದು ಹಾಗೂ ಸ್ಮರಣ ಸಂಚಿಕೆಗಳನ್ನು ಒಳಗೊಂಡಿದೆ ಎಂದು ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ. ದಯಾನಂದ್ ತಿಳಿಸಿದ್ದಾರೆ.
ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಪ್ರತಿ ವರ್ಷವೂ ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸೇವೆಸಲ್ಲಿಸಿದ ಸಾಧಕರನ್ನು ಗೌರವಿಸಲಾಗುತ್ತಿದೆ. ಈ ಬಾರಿಯ ವಾರ್ಷಿಕೋತ್ಸವ ಜೂನ್ 19 ರಂದು ಮಧ್ಯಾಹ್ನ 2:30 ಕ್ಕೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಸಮೀಪರುವ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.
ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಸತಿ ಮತ್ತು ಮೂಲ ಸೌಕರ್ಯ ವಿ. ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜೂಗೌಡ, ಪಬ್ಲಿಕ್ ಟಿ.ವಿ. ಸಂಸ್ಥಾಪಕ ಹೆಚ್.ಆರ್. ರಂಗನಾಥ್, ಡಿ.ಎಸ್ ಮ್ಯಾಕ್ಸ್ ಸಂಸ್ಥೆಯ ಅಧ್ಯಕ್ಷ ಕೆ.ವಿ. ಸತೀಶ್ ಅವರು ಸಾಧಕರನ್ನು ಗೌರವಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಚಲನಚಿತ್ರರಂಗದ ನಾಯಕ ನಟ ನಟಿಯರು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.