ಶಿವಮೊಗ್ಗ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕುವೆಂಪು ಹುಟ್ಟೂರಾದ ಕುಪ್ಪಳ್ಳಿಯಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಹಮ್ಮಿಕೊಂಡಿದ್ದು. ಮಾಜಿ ಸಚಿವ ಕಿಮ್ನನೆ ರತ್ನಾಕರ್ ನೇತೃತ್ವದಲ್ಲಿ ಆರಂಭಗೊಂಡ ಪಾದಯಾತ್ರೆಗೆ ಸಾಹಿತಿಗಳು, ವಿವಿಧ ಕನ್ನಡ ಪರ ಸಂಘಟನೆಗಳು, ಪ್ರಗತಿಪರರು ಸಾಥ್ ನೀಡಿದ್ದಾರೆ.
ಕುಪ್ಪಳ್ಳಿಯ ಕವಿಶೈಲದಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕಿಮ್ಮನೆ ರತ್ನಾಕರ್, ಪಾದಯಾತ್ರೆಯನ್ನ ಸರಿಸುಮಾರು 7-10 ಕ್ಕೆ ಚಾಲನೆ ನೀಡಿದರು. ನಂತರ ಮಾಧ್ಯಮದ ಜೊತೆ ಮಾತನಾಡಿದ ಕಿಮ್ಮನೆ ರತ್ನಾಕರ್, ರೋಹಿತ್ ಚಕ್ರವರ್ತಿ ಮತ್ತು ಶಿಕ್ಷಣ ಸಚಿವ ನಾಗೇಶರವರು ಮಾಡಿದ ಅಧ್ವಾನವನ್ನ ಕೈಬಿಡಬೇಕು,ಬಿಜೆಪಿಯ ಹೊಸ ಹೊಸ ಕಾರ್ಯಕ್ರಮವನ್ನ ಅನುಷ್ಠಾನಗೊಳಿಸಲು ನಮ್ಮ ವಿರೋಧವಿಲ್ಲ. ಆದರೆ ಚರ್ಚೆ ನಡೆಸಬೇಕು, ಸದನದಲ್ಲಿ ಚರ್ಚೆ ಮಾಡಬೇಕು. ವಿಷಯವಾರು ಸಮಿತಿ ರಚನೆ ಮಾಡಿ ಇಂತಹ ವಿಷಯವನ್ನ ಜಾರಿಗೊಳಿಸುತ್ತೇವೆ ಎಂಬುದನ್ನ ತಿಳಿಸಿ ನಂತರ ಅನುಷ್ಠಾನಗೊಳಿಸಬೇಕು ಎಂದರು.
ಹಂಸಲೇಖ, ಪತ್ರಕರ್ತ ದಿನೇಶ್ ಅಮೀನಮಟ್ಟು ಸಾಹಿತಿಗಳಾದ ಜಿ.ಸಿದ್ದರಾಮಯ್ಯ,ಪ್ರೊಚೆನ್ನಿ, ವಕೀಲ ಶ್ರೀಪಾಲ, ನಾ.ಡಿಸೋಜ,ಡಿಎಸ್ ಎಸ್ ಗುರು ಮೂರ್ತಿ, ರೈತ ಸಂಘಟನೆಯ ಕೆ.ಟಿ.ಗಂಗಾಧರ್,ಜಿಲ್ಲಾ ಕಸಾಪದ ಅಧ್ಯಕ್ಷ ಡಿ.ಮಂಜುನಾಥ್ ಮೊದಲಾದವರು ಭಾಗಿಯಾಗಿದ್ದರು.
ಸಮಾರೋಪ ಸಮಾರಂಭ:
ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಭಾಪತಿ ರಮೇಶ್ ಕುಮಾರ್, ಅಂದು ನಾಥೂ ರಾಮ್ ಗೋಡ್ಸೆ ಗಾಂಧಿ ಕಾಲಿಗೆ ನಮಸ್ಕರಿಸಿ ಗುಂಡು ಹಾರಿಸಿಕೊಂದ ರೀತಿಯಲ್ಲಿಯೇ ಮೋದಿ ಸಂಸತ್ ಗೆ ನಮಸ್ಕರಿಸಿ ಸಂವಿಧಾನವನ್ನ ಕೊಲ್ಲುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ನೇರವಾಗಿ ಸಂವಿಧಾನ ಮುಟ್ಟುವ ಧೈರ್ಯ ಬಿಜೆಪಿಗರಿಗೆ ಇಲ್ಲ. ಈಗಾಗಿ ಬೇರೆ ಬೇರೆ ಮಾರ್ಗದಲ್ಲಿ ಅದರ ಶಕ್ತಿ ಕುಂದಿಸುವ ಕೆಲಸ ಮಾಡ್ತಿದ್ದಾರೆ. ಗಾಂಧಿಯನ್ನು ಕೊಂದಿದ್ದು ಯಾರು..? ನಾಥ್ ರಾಮ್ ಗೂಡ್ಸೆ ಕೊಂದ. ಗಾಂಧಿಯನ್ನು ಕೊಲ್ಲುವ ದಿನ ನಾಥ್ ರಾಮ್ ಗೂಡ್ಸೆ ಕಾಲಿಗೆ ನಮಸ್ಕರಿಸಿ ಗುಂಡು ಹಾರಿಸುತ್ತಾನೆ. ಮೋದಿ ಸಹ ಪ್ರಧಾನಿಯಾದಾಗ ಸಂಸತ್ತಿಗೆ ನಮಸ್ಕರಿಸಿ, ಸಂವಿಧಾನ ಕೊಲ್ಲುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಹೇಳುವ ಮೂಲಕ ಗಂಭೀರ ಆರೋಪ ಮಾಡಿದರು. ಟ್ಯುಟೋರಿಯಲ್ ನಡೆಸುವವರು ಪಠ್ಯ ಪರಿಷ್ಕರಣೆ ಸಮಿತಿಯಲ್ಲಿದ್ದಾರೆ ಎಂದು ಮಾಜಿ ಸಭಾಪತಿ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಮಣ್ಣಿನಲ್ಲಿ ಕುವೆಂಪು ಜನ್ಮ ತಾಳಿದರು. ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು ಜನಿಸಿದ ಊರು ಇದು. ಇಂದು ಅವರ ಹೆಸರು ಹೇಳಲು ಸಹ ನಾವು ಅರ್ಹತೆ ಕಳೆದುಕೊಳ್ಳುತ್ತಿದ್ದೇವೆ.ನಾಡಿನ ಹಲವು ಮೇಧಾವಿಗಳಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು.ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ಇದ್ದವರು ಯಾರು..ಟ್ಯೂಟೋರಿಯಲ್ಸ್ ನಡೆಸುವವರು ಸಮಿತಿಯಲ್ಲಿದ್ದಾರೆ.ಸಂವಿಧಾನ ರಚನೆ ಮಾಡಲು ಈ ದೇಶದಲ್ಲಿ ಬಹಳ ಜನರಿದ್ದರು.ಆವಾಗ ಮೀಸಲಾತಿ ಇರಲಿಲ್ಲ. ಆದರೂ ಅಂಬೇಡ್ಕರ್ ಅವರನ್ನು ಕರಡು ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.ಯಾಕಂದ್ರೆ ಎಲ್ಲಾ ದೇಶದ ಸಂವಿಧಾನವನ್ನು ಅಂಬೇಡ್ಕರ್ ಅರ್ಥೈಸಿಕೊಂಡಿದ್ದರು.ಪ್ರಗತಿ ವಿರೋಧಿಗಳು, ಮತ್ತು ಪ್ರಗತಿಪರರ ನಡುವೆ ನಡೆಯುತ್ತಿರುವ ಯುದ್ದ ಇದು. ಸಂವಿಧಾನ ನಿರರ್ಥಕಗೊಳಿಸುವುದು ಇವರ ಉದ್ದೇಶವಿದು. ಈ ಹಿಂದೆ ರಾಮನನ್ನು ಜಹಾಗೀರ್ ತೆಗೆದುಕೊಂಡಿದ್ದರು. ಈಗ ದೇಶ ಭಕ್ತಿಯನ್ನ ಜಹಗೀರ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಮಕ್ಕಳ ಮನಸ್ಸಿನಲ್ಲಿ ಹೆಡ್ಗೆವಾರ್ ವಿಚಾರ ತುಂಬಿ ಏನು ಸಾಧಿಸಲು ಹೊರಟ್ಟಿದ್ದೀರಿ ಎಂದು ಬಿಜೆಪಿ ಸರಕಾರವನ್ನ ಕಟುವಾಗಿ ಟೀಕಿಸಿದರು.
ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಕೆಲಸ: ಸಿದ್ದರಾಮಯ್ಯ
ಕನ್ನಡದ ಅಸ್ಮಿಥೆಗೆ ಧಕ್ಕೆ ತರುವ ಕೆಲಸ ಆಗ್ತಾ ಇದೆ. ಕನ್ನಡದ ಅಸ್ಮಿಥೆಗೆ ದಕ್ಕೆ ಬಂದಾಗ, ಕನ್ನಡಿಗ ಎದ್ದೇಳಬೇಕಿದೆ. ಬಸವಣ್ಣ, ಕುವೆಂಪು, ನಾರಾಯಣಗುರು, ಅಂಬೇಡ್ಕರ್ ಅವರ ಚರಿತ್ರೆಯನ್ನ ತಿರುಚುವ ಕೆಲಸ ಆಗಿದೆ ಕನ್ನಡಿಗ ಹೋರಾಟ ನಡೆಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ಬಸವಣ್ಣ ವೈದಿಕಧರ್ಮವನ್ನ ಪರ್ಯಾಯವಾಗಿ ಮನುಷ್ಯತ್ವ ಧರ್ಮವನ್ನ ಹುಟ್ಟುಹಾಕಿದರು. ಅದೇ ಲಿಂಗಾಯಿತ ಧರ್ಮವಾಗಿದೆ. ಅಸಮಾನತೆಯ ವಿರುದ್ಧ ಹೋರಾಟ ಮಾಡಿದವರು ಬಸವಣ್ಣ. ಬಿಜೆಪಿಯವರು ಮತ್ತೆ ವೈದಿಕ ಧರ್ಮದ ಕಡೆ ಸೆಳೆಯಲಾಗುತ್ತಿದ್ದಾರೆ ಎಂದು ಆರೋಪಿಸಿದರು. ಸಂವಿಧಾನ ಏನು ಹೇಳುತ್ತಿದೆ. ಅಂಬೇಡ್ಕರ್ ಕರಡು ಸಂವಿಧಾನಕ್ಕೆ ನೇಮಕವಾಗದಿದ್ದರೆ ಉತ್ತಮ ಸಂವಿದಾನ ಸಿಕ್ತಾಯಿತ್ತಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ. ಆರ್ ಎಸ್ ಎಸ್ ಮತ್ತು ಅಂಗ ಸಂಸ್ಥೆಗಳಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ, ಸಮಾನತೆ ಹೇಳುವ ಸಂವಿಧಾನವು ಮನುವಾದಿಗಳಿಗೆ ಇಷ್ಟವಿಲ್ಲ ಎಂದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ಜಾತಿ ಕೆಳಜಾತಿಯನ್ನ ತುಳಿಯುತ್ತಿರುತ್ತದೆ. ಇದು ಮನುವಾದಿಗಳಿಗೆ ಇಷ್ಟ. ಆದರೆ ಸಮಾನತೆ ಬಯಸಿರಲಿಲ್ಲ. ಸಮಾನತೆ ಸುಮ್ಮನೆ ಬರೊದಿಲ್ಲ. ಜಾತಿ ವ್ಯವಸ್ಥೆ ಸಮಾಜದಲ್ಲಿ ಬಹಳ ಆಳವಾಗಿ ಬೇರುಬಿಟ್ಟಿದೆ.ಬಸವಣ್ಣನ ವಚನದ ರೀತಿಯಲ್ಲಿ ಬದಲಾವಣೆ ಆಗಿಲ್ಲ.ಅನೇಕ ಜನ ವಚನ ಹೇಳಿ ಜಾತಿಯನ್ನ ಅನುಸರಿಸುತ್ತಾರೆ. ಇಂತಹವರಿಂದ ಮಾನವೀಯ ಮೌಲ್ಯ, ದೇಶಭಕ್ತಿಯನ್ನ ಬೆಳೆಸಲಾಗಲು ಸಾಧ್ಯವಾ ಎಂದರು.
ಟಿಟಿ ಕೃಷ್ಣಮಾಚಾರಿ ಅವರು ಸಹ ಅಂಬೇಡ್ಕರ್ ಅವರ ಸಂವಿಧಾನ ಕರಡು ರಚನೆಯ ಆಯೋಗದಲ್ಲಿ ಇದ್ದರು. ಯಾರು ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಅವರು ಏನಾದರೂ ಸಂವಿಧಾನ ರಚನ ಸಮಿತಿಯಲ್ಲಿದ್ದರೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಕಾಣಲು ಸಾಧ್ಯವಾಗುತ್ತಿರಲಿಲ್ಲ.
ಆದರೆ ಟಿ.ಟಿ.ಕೃಷ್ಣಮಾಚಾರಿ ಅವರು ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂದು ಕರೆದರು. ಆದರೆ ಸರ್ಕಾರ ರೋಹಿತ್ ಚಕ್ರತೀರ್ಥರ ಮೂಲಕ ಸಂವಿಧಾನ ಶಿಲ್ಪಿಯನ್ನ ತೆಗೆಯಿಸಿತು. ಹಾಗಾದರೆ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅಲ್ವಾ? ಎಂದ ಸಿದ್ದರಾಮಯ್ಯ ರಾಜಕೀಯೇತರವಾಗಿ ಕಿಮ್ಮನೆ ರತ್ನಾಕರ್ ಹೋರಾಟವನ್ನ ಆರಂಭಿಸಿದ್ದಾರೆ. ಸಾಹಿತಿಗಳು ಮತ್ತು ವಿವಿಧ ಸಂಘಟನೆಗಳು ಕೈಜೋಡಿಸಲಿ ಎಂದರು.
ಅಂಬೇಡ್ಕರ್, ನಾರಾಯಣಗುರು, ಹಿಂದುಗಳಲ್ಲವಾ? ಬಿಜೆಪಿಯವರು ಮಾತ್ರ ಹಿಂದೂಗಳ, ಮನಿಷ್ಯತ್ವ ಇರುವವರಿಗೆ ವಿಕೃತ ಭಾವನೆ ಇರಲು ಸಾಧ್ಯವಿಲ್ಲ.ಅಂಬೇಡ್ಕರ್ ರಿಗೆ ಸಂವಿಧಾನ ಶಿಲ್ಪಿ ಎಂದು ಕರೆಯದೆ ಇರುವುದು ವಿಕೃತ ಮನಸ್ಸು ಎಂದು ಆರೋಪಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ವೇದಿಕೆ ಮೇಲೆ ಬಂದರೂ ಸ್ವಾಭಿ ಮಾನಿ ಕಿಮ್ಮನೆ ರತ್ನಾಕರ್ ವೇದಿಕೆಗೆ ಬಂದಿರಲಿಲ್ಲ. ಹಾಗಂತ ಅವರ ಪ್ರತಿಭಟನಾ ಕಾರ್ಯಕ್ರಮದಲ್ಲಿ ವಿರೋಧ ವ್ಯಕ್ತವಾಗಿದೆ ಎಂದರೆ ನಿಮ್ಮ ಅಭಿಪ್ರಾಯ ತಪ್ಪು.ಕಿಮ್ಮನೆ ರತ್ನಾಕರ್ ಅವರ ಕಾರ್ಯಕ್ರಮವಾದರೂ ಫ್ಲೆಕ್ಸ್ ನಲ್ಲೂ ಅವರ ಭಾವಚಿತ್ರವನ್ನ ಹಾಕಿಕೊಳ್ಳದೆ ಪಾದಯಾತ್ರೆ ನಡೆಸಿದರು. ಪಾದಯಾತ್ರೆಯ ಉದ್ದಗಲಕ್ಕೂ ಅವರ ಫ್ಲೆಕ್ಸ್ ಇರಲಿಲ್ಲ. ನಂತರ ತೀರ್ಥಹಳ್ಳಿಯಲ್ಲಿ ಕುವೆಂಪು ವಿಶ್ವಮಾನವ ವೇದಿಕೆಯಲ್ಲೂ ಅಳವಡಿಸಿದ ಫ್ಲೆಕ್ಸ್ ನಲ್ಲೂ ಸಿದ್ದರಾಮಯ್ಯ, ಡಿಕೆಶಿ, ಹರಿಪ್ರಸಾದ್, ಕಾಗೋಡು ತಿಮ್ಮಪ್ಪ,ಬುದ್ದ, ಜೈನ, ಆದಿ ಶಂಕರಾಚಾರ್ಯ,ನರಾಯಣಗುರು, ಅಂಬೇಡ್ಕರ್, ಪುರಂದರ ದಾಸ, ಕನಕದಾಸ, ಬಸವಣ್ಣ, ವಾಲ್ಮೀಖಿಯವರ ಭಾವಚಿತ್ರವನ್ನ ಹಾಕಿದ್ದಾರೆ. ಇದು ಫ್ಲೆಕ್ಸ್ ನಲ್ಲಿ ಎಡ ಮತ್ತು ಮೇಲ್ಭಾಗದ ಚಿತ್ರಣವಾದರೆ, ಎಡಭಾಗದಲ್ಲಿ ಜಿ.ಸಿದ್ದರಾಮಯ್ಯ,ರೈತ ಸಂಘದ ಅಧ್ಯಕ್ಷ ಹೆಚ್ ಆರ್.ಬಸವರಾಜಪ್ಪ, ಡಿಎಸ್ ಎಸ್ ನ ಗುರುಮೂರ್ತಿ, ಸಾಹಿತಿ ಕುಂ.ವೀರಭದ್ರಪ್ಪ, ಸಂಗೀತ ನಿರ್ದೇಶಕ ಹಂಸಲೇಖ, ಹೀಗೆ ವಿವಿಧ ಸಂಘಟನೆಯ ಸಾಹಿತಿಯರ ಫೊಟೊ ಹಾಕಿದ್ದಾರೆ.ಆದರೆ, ಕಿಮ್ಮನೆ ರತ್ನಾಕರ್ ತಮ್ಮ ಫೊಟೋ ಹಾಕಿಕೊಳ್ಳದೆ ನಿಜವಾದ ಹೋರಾಟಕ್ಕೆ ಕೈ ಹಾಕಿದ್ದಾರೆ. ಓರ್ವ ಸ್ವಾಭಿಮಾನಿ, ಗಾಂಧಿ ತತ್ವದ ಮೇಲೆ ನಡೆಯುವ ರಾಜಕಾರಣಿಗೆ ಈ ರೀತಿ ನಡೆದುಕೊಳ್ಳಲು ಸಾಧ್ಯವೇ ಹೊರತು, ಪ್ರಚಾರ ಪ್ರಿಯರಿಗೆ ಇದು ಸಾಧ್ಯವಿಲ್ಲ.
ತಮ್ಮ ಭಾಷಣದಲ್ಲೂ ಕಿಮ್ಮನೆ ಎಲ್ಲೂ ತನ್ನಿಂದ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಲಿಲ್ಲ ಬದಲಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಭಾಪತಿ ರಮೇಶ್ ಕುಮಾರ್, ಹರಿಪ್ರಸಾದ್, ಸಾಹಿತಿ ಜಿ.ಸಿದ್ದರಾಮಯ್ಯನವರೇ ನಿಮ್ಮಿಂದ ಸರ್ಕಾರ ಬದಲಾವಣೆ, ರೋಹಿತ್ ಚಕ್ರತೀರ್ಥರ ಪಠ್ಯ ಪುಸ್ತಕ ತೆಗೆಯಲು ಸಾಧ್ಯವೆಂದು ಮಾತನಾಡಿದರು.
ಈ ವೇಳೆಯಲ್ಲೂ ಕುಪ್ಪಳ್ಳಿಯಿಂದ ತೀರ್ಥಹಳ್ಳಿಯವರೆಗೆ ನಡೆದ ಪಾದಯಾತ್ರೆಯ ಕಾರ್ಯಕ್ರಮದ ಯಶಸ್ವಿಗೆ ಕಾರ್ಯಕರ್ತರ ಶ್ರಮವಿದೆ. ಭಾಷಣದಲ್ಲೂ ತಮಗೆ ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸುವ ಭಾಷಣದಲ್ಲಿ ಭಾವೋದ್ರೇಕರಾದರು. ಇದು ಒಬ್ಬ ಸಂವೇದನಾಶೀಲ ರಾಜಕಾರಣಿಗೆ ಮಾತ್ರ ಸಾಧ್ಯವೆಂದರೆ ತಪ್ಪಾಗಲಾಗದು.