ಹುಬ್ಬಳ್ಳಿ : ಇಂತಹದೊಂದು ಘಟನೆ ನಡೆಯಬಾರದಿತ್ತು. ಕಳೆದ ಸುಮಾರು ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಇಂತಹ ಘಟನೆಗಳು ಸಂಭವಿಸಿರಲಿಲ್ಲ. ಆದರೆ ಈಗ ನೂರಾರು ಜನರು ಸಾವನ್ನಪ್ಪಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ ಎಂದು ಒಡಿಶಾ ರಾಜ್ಯದಲ್ಲಿ ನಡೆದ ರೈಲ್ವೆ ದುರಂತಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ದೇವರು ಮೃತರ ಕುಟುಂಬಕ್ಕೆ ದುಃಖವನ್ನು ತಡೆಯುವ ಶಕ್ತಿ ನೀಡಲಿ. ಮೃತರ ಕುಟುಂಬಕ್ಕೆ ಹಾಗೂ ಅಪಘಾತದಲ್ಲಿ ಒಳಗಾದವರ ಕುಟುಂಬಕ್ಕೆ ಶೀಘ್ರವಾಗಿ ಪರಿಹಾರ ಕಲ್ಪಿಸುವ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿವೆ. ಕೇಂದ್ರ ರೈಲ್ವೆ ಸಚಿವರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಪ್ರಕರಣದ ಕುರಿತು ಕೂಡ ಉನ್ನತ ಮಟ್ಟದ ತನಿಖೆಯನ್ನು ಕೂಡ ಮಾಡುವ ಮೂಲಕ ಪರಿಶೀಲನೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.