ಸುರತ್ಕಲ್: ಇಲ್ಲಿಗೆ ಸಮೀಪದ ಜೋಕಟ್ಟೆಯ ಬಳಿಯ ರುಚಿ ಗೋಲ್ಡ್ ಕಂಪೆನಿಯು ತೋಕೂರು ಹಳ್ಳದ ಮೂಲಕ ನೇರವಾಗಿ ಪಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯದ ವಿಷ ಹರಿಸುತ್ತಿದೆ ಎಂದು ಡಿವೈ ಎಫ್ ಐ ರಾಜ್ಯಾಧ್ಯಕ್ಷ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ದು ಎರಡು ದಿನಗಳ ಹಿಂದೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು, ಮಾರಕ ತ್ಯಾಜ್ಯವನ್ನು ದೊಡ್ಡ ಪ್ರಮಾಣದಲ್ಲಿ ತೋಕೂರು ಹಳ್ಳಕ್ಕೆ ಹರಿಸುತ್ತಿರುವುದನ್ನು ಗುರುತಿಸಿದ್ದಾರೆ.
ಸಿಕ್ಕಿರುವ ಸಾಕ್ಷ್ಯಾಧಾರಗಳ ಪ್ರಕಾರ ತಕ್ಷಣವೇ ರುಚಿಗೋಲ್ಡ್ ಗೆ ಬೀಗ ಜಡಿಯುವಷ್ಟು ಗಂಭೀರವಾಗಿದೆ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೇ ಒಪ್ಪುತ್ತಾರೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಆದರೆ ಅಧಿಕಾರಿಗಳು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕ್ರಮ ಕೈಗೊಂಡಿದ್ದು ಕಂಪನಿಯ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಮೌಖಿಕವಾಗಿ ಕಂಪನಿಯ ಸಿಬ್ಬಂದಿಗಳಿಗೆ ತಿಳಿಸಿದ್ದು ಸಿಬ್ಬಂದಿಗಳು ತೋಕೂರು ಹಳ್ಳದಲ್ಲಿ ಶೇಖರಣೆಗೊಂಡಿರುವ ಮಾರಕ ತ್ಯಾಜ್ಯವನ್ನು ತೆರವುಗೊಳಿಸುವ ನಾಟಕ ಮಾಡುತ್ತಿದ್ದು ಬಹುತೇಕ ತ್ಯಾಜ್ಯ ಈಗಾಗಲೇ ಅರಬ್ಬಿ ಸಮುದ್ರ ಸೇರಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಹಸಿರು ಪೀಠ, ಪರಿಸರ ನಿಯಮ ಹಾಗೂ ಜನತೆಯ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ. ಕೂಡಲೇ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ತುಳುನಾಡಿನ ಯುವಜನರಿಗೆ ಉದ್ಯೋಗವನ್ನೂ ನಿರಾಕರಿಸಿ, ನೆಲ ಜಲವನ್ನೂ ನಾಶ ಪಡಿಸುವ ಇಂತಹ ಖತರ್ ನಾಕ್ ಉದ್ಯಮಗಳಿಗೆ ಸರಿಯಾದ ಶಿಕ್ಷೆ ಆಗಲೇಬೇಕು ಎಂದು “ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ” ಆಗ್ರಹಿಸುತ್ತದೆ ಹಾಗೂ ಸೂಕ್ತ ಕ್ರಮಗಳು ಆಗದಿದ್ದಲ್ಲಿ ತೀವ್ರ ಹೋರಾಟವನ್ನು ನಡೆಸಲಿದೆ.
ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ತುಳುನಾಡಿನ ಭವಿಷ್ಯವನ್ನೇ ಮುಳುಗಿಸುತ್ತಿರುವ ಗಂಭೀರವಾದ ಕೈಗಾರಿಕಾ ಮಾಲಿನ್ಯದ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ತುಳುನಾಡಿನ ಜನತೆ ಹಾಗೂ ಮಾಧ್ಯಮಗಳಾದರು ನಮ್ಮ ಜೀವನದಿ, ಸಮುದ್ರವನ್ನು ನಾಶಪಡಿಸುತ್ತಿರುವ ಕೈಗಾರಿಕೆಗಳು, ಕಂಪೆನಿಗಳೊಂದಿಗೆ ಕೈ ಜೋಡಿಸಿರುವ ಅಧಿಕಾರಿ ವರ್ಗ, ಜನಪ್ರತಿನಿಧಿಗಳ ವಿರುದ್ದ ಪ್ರಬಲ ಧ್ವನಿ ಎತ್ತಲೇಬೇಕಿದೆ ಎಂದು ಮುನಿರ್ ಕಾಟಿಪಳ್ಳ ತಿಳಿಸಿದ್ದಾರೆ.