ಹುಬ್ಬಳ್ಳಿ : ಸೌದತ್ತಿ ಶ್ರೀ ರೇಣುಕಾ ಯಲ್ಲಮ್ಮ ಜಾತ್ರೆಗೆ ಹೋಗಿ ಬರುವ ಭಕ್ತಾದಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಫೆಬ್ರವರಿ 21 ರಿಂದ ಮಾರ್ಚ್ 10 ರ ವರೆಗೆ ಹುಬ್ಬಳ್ಳಿ ಹಾಗೂ ನವಲಗುಂದದಿಂದ ಜಾತ್ರಾ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ್ ತಿಳಿಸಿದ್ದಾರೆ.
ಭಾರತ ಹುಣ್ಣಿಮೆ ಪ್ರಯುಕ್ತ ಸೌದತ್ತಿ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆಯು ಫೆಬ್ರವರಿ 21 ರಿಂದ ಮಾರ್ಚ್ 10 ರವರೆಗೆ ವೈಭವದಿಂದ ಜರುಗಲಿದೆ. ರಾಜ್ಯದ ವಿವಿಧ ಸ್ಥಳಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಫೆ.24ರಂದು ಶನಿವಾರ ಭಾರತ ಹುಣ್ಣಿಮೆ, 25ರಂದು ರವಿವಾರ ರಜೆ, 27ರಂದು ಮಂಗಳವಾರ ಹಾಗೂ ಮಾರ್ಚ್ 1 ರಂದು ಶುಕ್ರವಾರ ದೇವಿಯ ವಾರದ ನಿಮಿತ್ಯ ಹೆಚ್ಚಿನ ಜನರ ಸಂಚಾರ ನಿರೀಕ್ಷಿಸಲಾಗಿದೆ.
ಜಾತ್ರೆಗೆ ಹೋಗಿ ಬರುವ ಭಕ್ತಾಧಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ಸೌದತ್ತಿ ಯಲ್ಲಮ್ಮನಗುಡ್ಡಕ್ಕೆ ಹುಬ್ಬಳ್ಳಿಯಿಂದ 50 ಹಾಗೂ ನವಲಗುಂದದಿಂದ 10, ಒಟ್ಟು 60 ಹೆಚ್ಚುವರಿ ಜಾತ್ರಾ ವಿಶೇಷ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 150 ಕ್ಕೂ ಹೆಚ್ಚು ಚಾಲಕರು- ನಿರ್ವಾಹಕರು, ಮೇಲ್ವಿಚಾರಣೆಗಾಗಿ 10 ಅಧಿಕಾರಿಗಳು ಹಾಗೂ 20 ಮೇಲ್ವಿಚಾರಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪ್ರಯಾಣಿಕರ ಒತ್ತಡಕ್ಕೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುತ್ತದೆ.
ಹುಬ್ಬಳ್ಳಿಯಲ್ಲಿ ಜಾತ್ರೆ ವಿಶೇಷ ಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ.
ಹುಬ್ಬಳ್ಳಿ -ಯಲ್ಲಮ್ಮನ ಗುಡ್ಡ ಬಸ್ಸುಗಳು ಧಾರವಾಡ, ಅಮ್ಮಿನಭಾವಿ, ಸೌದತ್ತಿ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಸಂಚರಿಸುತ್ತವೆ.
ನವಲಗುಂದ -ಯಲ್ಲಮ್ಮನ ಗುಡ್ಡ ಬಸ್ಸುಗಳು ನವಲಗುಂದ ಬಸ್ ನಿಲ್ದಾಣ ದಿಂದ ಹೊರಡುತ್ತವೆ. ಗೊಬ್ಬರ ಗುಂಪಿ ಕ್ರಾಸ್, ಗೊಬ್ಬರ ಗುಂಪಿ, ಅಳಗವಾಡಿ ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ.