ಹುಬ್ಬಳ್ಳಿ: ನಳಿನ್ಕುಮಾರ್ ಕಟೀಲು ರಾಜೀನಾಮೆ ವಿಚಾರ, ಅದು ಅವರ ಪಕ್ಷದ ಆಂತರಿಕ ವಿಚಾರ. ಇದಕ್ಕೆ ನಾನು ಏನೂ ಮಾತಾಡುವುದಿಲ್ಲ. ಬಿಜೆಪಿ ಗೊಂದಲದಲ್ಲಿದೆ. ಹಾಗಾಗಿ ಅವರೇ ಸ್ಪಷ್ಟ ಪಡಿಸಬೇಕಾಗಿದೆ. ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರವೆಂದು ಹುಬ್ಬಳ್ಳಿಯಲ್ಲಿ ನೂತನ ಎಮ್ಎಲ್ಸಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಹಿಂದೆ ಹೇಳಿರುವುದು ಎಲ್ಲವೂ ನಿಜ ಆಗ್ತಿದೆ. ಸೋಲಿಗೆ ಕಾರಣ ಯಾರೂ ಅನ್ನುವುದನ್ನು ನಳಿನ್ಕುಮಾರ್ ಕಟೀಲು ಅವರೇ ಸ್ಪಷ್ಟ ಪಡಿಸಬೇಕಾಗಿದೆ. ಸೋಲಿಗೆ ಹಲವಾರು ಕಾರಣ ಇವೆ. ಸ್ವಯಂಕೃತ ಅಪರಾಧವೂ ಸೋಲಿಗೆ ಕಾರಣ ಎಂದರು.
ಈಗ ಬಿಜೆಪಿ ತಳಪಾಯವೇ ಕುಸಿದು ಹೋಗುತ್ತಿದೆ. ಅದನ್ನು ಗಟ್ಟಿ ಮಾಡೋ ಕೆಲಸ ಆಗುತ್ತಿಲ್ಲ. ಬಿಜೆಪಿಯ ಅಡಿಪಾಯವೇ ಡಿಸ್ಟರ್ಬ್ ಆಗಿ ಕುಸಿದು ಹೋಗುತ್ತಿದೆ. ಇದು ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ. ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ.
ರಾಜ್ಯಾಧ್ಯಕ್ಷ ಲಿಂಗಾಯತರಿಗೆ ಕೊಡಬೇಕು ಅನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಬಿಜೆಪಿಯೊಂದಿಗೆ ನನ್ನ ಸಂಬಂಧವೇ ಮುಗಿದು ಹೋಗಿದೆ. ನಾನು ಏಕೆ ಅದನ್ನು ಹೇಳಲಿ? ರಾಜ್ಯ ಬಿಜೆಪಿ ಬಹಳ ಗೊಂದಲದಲ್ಲಿದೆ. ವಿಪಕ್ಷ ನಾಯಕ ಯಾರು ಅನ್ನೋದೇ ಗೊತ್ತಿಲ್ಲ. ಪ್ರತಾಪ್ ಸಿಂಹ ಒಂದು ತರಹ ಮಾತಾಡ್ತಾರೆ. ಏನ್ ಮಾಡೋದು ಎಲ್ಲ ಮಾಡಿದ್ದಾರೆ. ಪಕ್ಷ ರಿಪೇರಿ ಮಾಡೋಕೆ ಏನೂ ಉಳಿದಿಲ್ಲ ಎಂದರು.
ಇನ್ನು ಮುನೇನಕೊಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರ, ನಮ್ಮ ಜೊತೆ ಏನೂ ಚರ್ಚೆ ಮಾಡಿಲ್ಲ. ಅವರ ಮನಸ್ಸಿನಲ್ಲಿ ಏನಿದೆ ಏನೂ ಗೊತ್ತಿಲ್ಲ. ಅವರು ಪಕ್ಷಕ್ಕೆ ಬರುವ ಬಗ್ಗೆ ಚರ್ಚೆ ಆಗಿಲ್ಲ. ನಾನು ಅವರೊಂದಿಗೆ ಮಾತಾಡಿಲ್ಲ ಎಂದ ಶೆಟ್ಟರ್, ಅವರನ್ನ ಸ್ವಾಗತ ಮಾಡೋದು ಬಿಡೋದು ಏನಿಲ್ಲ. ಅವರ ಪಕ್ಷಕ್ಕೆ ಬರೋದರ ಬಗ್ಗೆ ಚರ್ಚೆಯೇ ಇಲ್ಲ ಎಂದ ಶೆಟ್ಟರ್ ಎಂದರು.