ಖಾನಾಪುರ: ಮಳೆಯಿಂದಾಗಿ ಗೋಡೆ ಬಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಚುಂಚವಾಡ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
15 ವರ್ಷದ ಅನಂತು ಧರ್ಮೇಂದ್ರ ಪಾಶೆಟ್ಟಿ ಮೃತಪಟ್ಟ ಬಾಲಕ. ರಾತ್ರಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಬಾಲಕ ಎದ್ದು ದನಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋಗಿದ್ದ. ಈ ಸಂದರ್ಭದಲ್ಲೇ ಕೊಟ್ಟಿಗೆಯ ಮಣ್ಣಿನ ಗೋಡೆ ಕುಸಿದು ಬಾಲಕ ಅದರಡಿ ಸಿಲುಕಿಕೊಂಡಿದ್ದಾನೆ.
ಗೋಡೆ ಬಿದ್ದ ಸದ್ದು ಹಾಗೂ ಬಾಲಕನ ಚೀರಾಟ ಕೇಳಿ ಮನೆಯ ಸದಸ್ಯರು ತಕ್ಷಣ ಧಾವಿಸಿದರು. ಮಣ್ಣಿನ ಗೋಡೆಯ ಅವಶೇಷ ತೆಗೆದು ಬಾಲಕರನ್ನು ಹೊರಗೆಳೆದರು. ಅಷ್ಟರೊಳಗೆ ಬಾಲಕ ಕೊನೆಯುಸಿರೆಳೆದಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.
ನಂದಗಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.