ಬೆಂಗಳೂರು ; ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈಗಾಗಲೇ ಅನೇಕ ಬಾರಿ ರಾಜಕಾರಣದಲ್ಲಿ ಅಧಿಕಾರದ ಭವಿಷ್ಯ ಯಾವತ್ತಿದ್ದರೂ ಪ್ರಾದೇಶಿಕ ಪಕ್ಷಗಳದ್ದೇ ಎಂದು ಹೇಳಿದ್ದಾರೆ. ಆದರೆ ಅದರೊಂದಿಗೆ ಮುಸಲ್ಮಾನರಿಗೆ ಒಂದು ವಿಚಾರ ತಿಳಿಸಿದ್ದಾರೆ ಕುಮಾರಣ್ಣ.. “ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಕಾಂಗ್ರೆಸ್ನಿಂದ ಎನ್ನುವುದನ್ನು ಮುಸಲ್ಮಾನರು ಅರಿಯಬೇಕು” ಎಂದಿದ್ದಾರೆ. ಈ ಮಾತು ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಇನ್ನು ಯಾವತ್ತೂ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಇತ್ತೀಚೆಗೆ ನಡೆದ 5 ರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡಿನ ಫಲಿತಾಂಶ ಒಂದು ವಿಚಾರವನ್ನಂತೂ ನಿರೂಪಿಸಿದೆ. ರಾಷ್ಟ್ರೀಯ ಪಕ್ಷಗಳಿಗೆ ಇನ್ನು ರಾಜಕೀಯ ಭವಿಷ್ಯವಿಲ್ಲ. ಇನ್ನೇನಿದ್ದರೂ ಅಧಿಕಾರ ಪ್ರಾದೇಶಿಕ ಪಕ್ಷಗಳದ್ದೇ ಎಂದು ಪುನರುಚ್ಛರಿಸಿದ್ದಾರೆ.
ಕರ್ನಾಟಕದಲ್ಲಿ ಸದ್ಯ ಬಿಜೆಪಿ ಅಧಿಕಾರದಲ್ಲಿ ಇದ್ದರೆ ಅದಕ್ಕೆ ಕಾರಣ ಕಾಂಗ್ರೆಸ್. ನನ್ನ ಮುಸಲ್ಮಾನ ಬಾಂಧವರು ಇದನ್ನು ಅರಿಯಬೇಕು. ಜೆಡಿಎಸ್ನಿಂದಾಗಿ ಬಿಜೆಪಿ ಅಧಿಕಾರ ಪಡೆಯಲಿಲ್ಲ, ಅದಕ್ಕೆಲ್ಲಾ ಕಾರಣ ಕಾಂಗ್ರೆಸ್ ಎಂದಿದ್ದಾರೆ. ಗುರುವಾರ ಜೆಡಿಎಸ್ ಪ್ರಧಾನ ಕಚೇರಿ ಜೆ ಪಿ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈ ವಿಚಾರ ಹೇಳಿದ್ದಾರೆ. ಉತ್ತರ ಕರ್ನಾಟಕದ ಜೆಡಿಎಸ್ ಮುಖಂಡ ಖಾದರ್ ಶೇಖ್ ಜೆಡಿಎಸ್ ಪಕ್ಷಕ್ಕೆ ಕೆಲ ಯುವ ಕಾರ್ಯಕರ್ತರನ್ನು ಸೇರಿಸಿದ ಸಂದರ್ಭದಲ್ಲಿ ಈ ಪತ್ರಿಕಾಗೋಷ್ಟಿ ನಡೆಯಿತು.
ಮಾಜಿ ಸಚಿವ ಸಿ ಎಂ ಉದಾಸಿ ಸಾವಿನಿಂದ ತೆರವಾದ ಹಾನಗಲ್ ವಿಧಾನಸಭಾ ಕ್ಷೇತ್ರ ಇನ್ನೂ ಖಾಲಿ ಇದೆ. ಕಾಂಗ್ರೆಸ್ ಎಂದಿಗೂ ಅಧಿಕಾರಕ್ಕೆ ಬರೋದಿಲ್ಲ. ಇದನ್ನು ಮುಸಲ್ಮಾನ ಬಾಂಧವರು ಅರಿಯದೇ ಇದ್ದರೆ ಸದಾ ನೀವು ಏಟು ತಿನ್ನುತ್ತಲೇ ಇರುತ್ತೀರಿ ಎಂದು ಎಚ್ಡಿಕೆ ಹೇಳಿದರು. 2013ರಲ್ಲಿ ಬಿಜೆಪಿ ಮೂರು ಭಾಗವಾಗಿ ಒಡೆದು ಹೋಗಿತ್ತು. ಆದ್ದರಿಂದಲೇ ಆಗ ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿದ್ದು. ಒಂದು ಪ್ರಧಾನ ಬಿಜೆಪಿ, ಇನ್ನೆರಡು ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಮತ್ತು ಬಿ ಶ್ರೀರಾಮುಲು ಇವರಿಬ್ಬರು ಪ್ರತ್ಯೇಕವಾಗಿ ನಡೆಸುತ್ತಿದ್ದ ಪಕ್ಷಗಳು. ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಕ್ಯಾಂಡಿಡೇಟ್ ಯಾರಾಗ್ಬೇಕು ಎನ್ನುವುದನ್ನೇ ಕಾಂಗ್ರೆಸ್ ಇನ್ನೂ ನಿರ್ಧಾರ ಮಾಡಲು ಒದ್ದಾಡುತ್ತಿದೆ. ಒಳಗೊಳಗೇ ಅವರೆಲ್ಲಾ ಗುದ್ದಾಡುತ್ತಿದ್ದಾರೆ. ಇನ್ನೂ ಎರಡು ವರ್ಷ ಇದೆ ಚುನಾವಣೆಗೆ.. ಅಲ್ಲಿವರಗೆ ಕಾಯುವ ತಾಳ್ಮೆಯೂ ಕಾಂಗ್ರೆಸ್ಗೆ ಇಲ್ಲ. ಆಗ್ಲೇ ಸೂಟ್ ಹೊಲೆಸಿಕೊಳ್ತಿದ್ದಾರೆ ಎಂದು ಲೇವಡಿ ಮಾಡಿದರು. ಹಾನಗಲ್ನಿಂದ ಖಾದರ್ ಶೇಖ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಉತ್ತರ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ಗೆಲುವು ಖಂಡಿತಾ ಎನ್ನುವುದನ್ನು ತೋರಿಸುತ್ತದೆ ಎಂದು ಎಚ್ಡಿಕೆ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ, ಮುಸ್ಲಿಮರು ಅರಿತುಕೊಳ್ಳಿ ; ಹೆಚ್ ಡಿ ಕುಮಾರ ಸ್ವಾಮಿ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.