ಮಡಿಕೇರಿ: ಅರಣ್ಯ ಹಕ್ಕು, ಮೂಲಭೂತ ಸೌಲಭ್ಯ, ಕೃಷಿ ಭೂಮಿ, ಸ್ಮಶಾನಕ್ಕೆ ಜಾಗ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡಗು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘ, ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ಮತ್ತು ಆದಿವಾಸಿಗಳ ರಕ್ಷಣಾ ಪರಿಷತ್ ನೇತೃತ್ವದಲ್ಲಿ ಆದಿವಾಸಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಆದಿವಾಸಿ ನಿರಾಶ್ರಿತರು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷರಾದ ಜೆ.ಪಿ.ರಾಜು ಜಿಲ್ಲೆಯ ಪ್ರತಿ ಆದಿವಾಸಿ ಕುಟುಂಬಕ್ಕೆ ಸ್ವಾವಲಂಬಿ ಬದುಕು ಸಾಗಿಸಲು ಕೃಷಿ ಭೂಮಿಯನ್ನು ನೀಡಬೇಕು, ಪ್ರತಿಯೊಂದು ಹಾಡಿ ವ್ಯಾಪ್ತಿಯಲ್ಲಿ ಆದಿವಾಸಿಗಳಿಗೆ ಪ್ರತ್ಯೇಕ ಸ್ಮಶಾನ ನೀಡಲು ಭೂಮಿಯನ್ನು ಗುರುತಿಸಬೇಕು, ರಸ್ತೆ ಅಭಿವೃದ್ಧಿ ಹಾಗೂ ವಿದ್ಯುತ್ ಸೌಲಭ್ಯವನ್ನು ಒದಗಿಸಬೇಕು, ಜಾತಿ ದೃಢೀಕರಣ, ಗುರುತಿಚಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್ ದಾಖಲಾತಿಗಳು ಪ್ರತಿಯೊಂದು ಕುಟುಂಬಕ್ಕೂ ತಲುಪುವಂತಾಗಬೇಕು, ಆದಿವಾಸಿಗಳ ಹೆಸರಿನಲ್ಲಿರುವ ಹಕ್ಕುಪತ್ರಗಳನ್ನು ಆರ್ ಟಿಸಿಯಾಗಿ ಪರಿವರ್ತನೆ ಮಾಡಬೇಕು ಮತ್ತು ಎಲ್ಲಾ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು, ವಸತಿ ವಂಚಿತ ಆದಿವಾಸಿಗಳಿಗೆ ವಸತಿ ಸೌಲಭ್ಯ ಒದಗಿಸಬೇಕು, ಪ್ರತಿ ಮನೆ ನಿರ್ಮಾಣಕ್ಕೆ ತಲಾ 5 ಲಕ್ಷ ರೂ. ನಂತೆ ಮಂಜೂರು ಮಾಡಬೇಕು, 94 ಸಿ ಮೂಲಕ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ನೀಡಬೇಕು, ಗಿರಿಜನರನ್ನು ನಿರ್ಲಕ್ಷಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜನಾಂಗಕ್ಕೆ ಒಳಪಡುವ ಆದಿವಾಸಿಗಳಿಗೆ ನ್ಯಾಯಯುತವಾಗಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬೇಡಿಕೆ ಸಕಾಲದಲ್ಲಿ ಈಡೇರದಿದ್ದಲ್ಲಿ ಕೊಡಗಿನ ಎಲ್ಲಾ ಆದಿವಾಸಿ ಸಂಘಟನೆಗಳನ್ನು ಒಗ್ಗೂಡಿಸಿ ಪಕ್ಷಾತೀತವಾಗಿ ದೆಹಲಿ ಚಲೋ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಜೆ.ಪಿ.ರಾಜು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಆದಿವಾಸಿಗಳ ರಕ್ಷಣ ವೇದಿಕೆಯ ಜಿಲ್ಲಾಧ್ಯಕ್ಷರಾದ ಜೆ.ಕೆ. ಪ್ರಕಾಶ್, ಕಾರ್ಯದರ್ಶಿ ಧರ್ಮ, ರಕ್ಷಣಾ ಪರಿಷತ್ ನ ಜಿಲ್ಲಾಧ್ಯಕ್ಷರಾದ ಸಣ್ಣಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ, ಸಂಚಾಲಕರಾದ ಬಿ.ಕೆ. ಮೋಹನ್, ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕರಾದ ಜಿ.ಕಾಳಿಂಗ, ವಿರಾಜಪೇಟೆ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾದ ವೈ.ಎಮ್. ಪ್ರಕಾಶ್, ಕುರುಬ ಹಿತರಕ್ಷಣಾ ವೇದಿಕೆಯ ಜಿಲ್ಲಾ ಖಜಾಂಚಿ ಪ್ರಭಾಕರ್ ಮತ್ತಿತರರು ಹಾಜರಿದ್ದರು.