ಮೂಡಿಗೆರೆ: ನಮ್ಮ ರಾಜ್ಯದ ಕಲೆಯನ್ನು ಸಂವಿಧಾನ ಬದ್ದವಾಗಿ ನಮ್ಮನ್ನಾಳಿದ ಸರಕಾರಗಳು ಘೋಷಣೆ ಮಾಡಲಿಲ್ಲ. ದೇಶೀಯ ಕಲೆ ಮತ್ತು ಸಾಹಿತ್ಯ, ಸಂಸ್ಕೃತಿ ಸೂರ್ಯ ಚಂದ್ರರು ಉಳಿಯುವಷ್ಟೇ ದಿನ ಬದುಕುತ್ತವೆ. ಹಾಗಾಗಿ ನಾವೇ ಕಲೆ, ಸಂಸ್ಕೃತಿ ಮತ್ತು ಜಾನಪದ ಕಲೆಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಕರೆ ನೀಡಿದರು.
ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಯುರೇಕಾ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸ್ತ್ರೀಯ ಜಾನಪದ ಶಕ್ತಿಯ ಪ್ರದರ್ಶನದಿಂದ ಮನುಷ್ಯನಿಗೆ ವಿದ್ಯೆ ಮತ್ತು ಬುದ್ಧಿ ಮತ್ತಷ್ಟು ಹೆಚ್ಚುತ್ತದೆ. ಇಂತಹ ಪ್ರದರ್ಶನದಿಂದ ತಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಂತುಷ್ಟರಾಗಿದ್ದಾರೆ. ಸಂಸ್ಕೃತಿಯು ದೇಶೀಯ ಸಂಪತ್ತಾಗಬೇಕು. ಇದರಿಂದ ದೇಶಾಭಿಮಾನ ಹೆಚ್ಚಾಗಬೇಕು. ಯಾವ ವ್ಯಕ್ತಿ ದೇಶದ ಸೌಂದರ್ಯ, ಸಂಸ್ಕೃತಿಯನ್ನು ಗೌರವಿಸದವರು ದೇಶಭಕ್ತನಾಗಲು ಸಾಧ್ಯವಿಲ್ಲ. ರಾಜಕೀಯದ ಮೇಲೆ ನಮಗೆ ನಂಬಿಕೆಯಿಲ್ಲ. ಪ್ರೇಕ್ಷಕರಿಗೆ ದಿಗ್ಗಜ ಕಲಾವಿದರ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಣ ಬಡಿಸುವ ಕೆಲಸ ಸತತವಾಗಿ 24 ವರ್ಷಗಳಿಂದ ತಾವು ಮಾಡಿಕೊಂಡು ಬಂದಿದ್ದು, ತಮ್ಮ ಹೆಸರಿನ ನುಡಿಸಿರಿಯನ್ನು ರಾಜಕೀಯಗೊಳಿಸದೇ ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೆಟ್ಟಲಿನಿಂದ ಮೆಟ್ಟಲಿಗೆ ಏರುವಾಗ ಕಾಲು ಎಳೆಯುವ ಪ್ರಯತ್ನ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದೆ. ಅದಕ್ಕೆ ಎದೆಗುಂದದೇ ಮುನ್ನುಗ್ಗುವ ಕೆಲಸ ಮಾಡಿದರೆ ಯಶಸ್ಸು ಕಾಣಲು ಸಾಧ್ಯವೆಂದು ಆಳ್ವಾಸ್ ವಿದ್ಯಾಸಂಸ್ಥೆ ಉದಾಹರಣೆಯಾಗಿದೆ. ಆಳ್ವಾಸ್ ನುಡಿಸಿರಿಯಂತಹ ಕಾರ್ಯಕ್ರಮದಿಂದ ತಪ್ಪಿಸಿಕೊಂಡರೆ ಜೀವನದಲ್ಲಿ ಏನ್ನನ್ನೋ ಕಳೆದುಕೊಂಡಂತೆ ಎಂದು ತಿಳಿಸಿದರು.