ಬೆಂಗಳೂರು: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ತನ್ನ ಪ್ರಕಟಣೆಯ ಎಲ್ಲ ಪುಸ್ತಕ ಗಳಿಗೆ ಶೇ 10ರಿಂದ ಶೇ 75ರವರೆಗೆ ರಿಯಾಯಿತಿ ಘೋಷಿಸಿದೆ.
ಈ ಕೊಡುಗೆ ಆಗಸ್ಟ್ ತಿಂಗಳು ಪೂರ್ತಿ ಇರಲಿದೆ. ರಜಾ ದಿನಗಳು ಸೇರಿದಂತೆ ವಾರದ ಎಲ್ಲ ದಿನಗಳು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆ ಯವರೆಗೆ ಪರಿಷತ್ತಿನ ಪುಸ್ತಕ ಮಾರಾಟ ವಿಭಾಗದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ.
ಕನ್ನಡ ರತ್ನಕೋಶ, ಸಂಕ್ಷಿಪ್ತ ಕನ್ನಡ ನಿಘಂಟು ಹಾಗೂ ಸಂಕ್ಷಿಪ್ತ ಕನ್ನಡ ಇಂಗ್ಲಿಷ್ ನಿಘಂಟಿಗೆ ಶೇ 10ರಷ್ಟು ರಿಯಾಯಿತಿ ಸಿಗಲಿದೆ. ಬೃಹತ್ ಕನ್ನಡ–ಕನ್ನಡ ನಿಘಂಟು ಪರಿಷತ್ತಿನ ಸದಸ್ಯರಿಗೆ ಶೇ 25ರಷ್ಟು ಹಾಗೂ ಸದಸ್ಯತ್ವ ಹೊಂದಿಲ್ಲದವರಿಗೆ ಶೇ 20ರಷ್ಟು ರಿಯಾಯಿತಿ ನಿಗದಿಪಡಿಸಲಾಗಿದೆ. ಪರೀಕ್ಷಾ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಉಳಿದ ಪುಸ್ತಕಗಳಿಗೆ ಶೇ 50ರಷ್ಟು ಹಾಗೂ ಸ್ಮರಣ ಸಂಚಿಕೆಗಳಿಗೆ ಶೇ 75ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಪುಸ್ತಕ ಮಾರಾಟಗಾರರು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು, ಜನಸಾಮಾನ್ಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಮನವಿ ಮಾಡಿದ್ದಾರೆ.