ಮೈಸೂರು: ರಾಜಕೀಯದಲ್ಲಿ ಮುಂದುವರಿಯಲು ಉತ್ತಮ ಆರೋಗ್ಯ, ಉತ್ಸಾಹ ಮುಖ್ಯವೇ ಹೊರತು ವಯಸ್ಸಲ್ಲ. ನನಗೀಗ 75 ವರ್ಷ ವಯಸ್ಸಾಗಿದೆ. ರಾಜಕೀಯದಲ್ಲಿ ಮುಂದುವರಿಯುವ ಆಸೆಯೂ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
‘ಸಿಗರೇಟ್ ಸೇದುತ್ತಿದ್ದುದರಿಂದ ತೊಂದರೆಯಾಗಿ ಹೃದಯನಾಳದಲ್ಲಿ ಸ್ಟೆಂಟ್ ಅಳವಡಿಸಲಾಗಿದೆ. ಮಧುಮೇಹವಿದ್ದರೂ ಎಚ್ಚರ ವಹಿಸಿದ್ದರಿಂದ ಗಂಭೀರ ಕಾಯಿಲೆಗಳಿಲ್ಲದೆ ಗಟ್ಟಿಮುಟ್ಟಾಗಿದ್ದೇನೆ’ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಜಾತಿಗಣತಿ ವರದಿ ಪಡೆದು ಚರ್ಚೆಗೆ ಇಡುವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ಮಾಡಿಸಿದೆ. ನಂತರ ಬಂದ ಸರ್ಕಾರಗಳು ಗಣತಿ ವರದಿಯನ್ನು ಪಡೆಯಲೇ ಇಲ್ಲ. ಅದರಲ್ಲೇನಿದೆ, ಯಾವ ಜಾತಿಯ ಸಮಾಜ ಬಡತನಲ್ಲಿದೆ ಎಂದೂ ಗೊತ್ತಾಗಿಲ್ಲ. ಎಲ್ಲ ಹಂತಗಳಲ್ಲೂ ಮೀಸಲಾತಿಯನ್ನು ವಿರೋಧಿಸಿದ ಬಿಜೆಪಿಯು ಹಿಂದುಳಿದ ವರ್ಗಗಳ ಪರವಾಗಿ ಇಲ್ಲ ಎಂದು ಟೀಕಿಸಿದರು.
ಸರ್ಕಾರಕ್ಕೆ ಬದ್ಧತೆ ಇದ್ದರೆ ಕೇಂದ್ರ ಜಲನ್ಯಾಯ ಮಂಡಳಿಯ ಅನುಮತಿ ಪಡೆದು ಮೊದಲು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ತಮಿಳುನಾಡಿಗೆ ಪತ್ರ ಬರೆದು ಅನುಮತಿ ಕೇಳುತ್ತೇವೆ ಎನ್ನುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.