ಬೆಂಗಳೂರು, ; ಸಾರ್ವಜನಿಕವಾಗಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ತಜ್ಞರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಆರ್ಟಿ ನಗರದ ನಿವಾಸದ ಬಳಿ ಮಾತನಾಡಿದ ಅವರು, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕೆಂಬ ಒತ್ತಡಗಳು ಇವೆ. ಆದರೆ, ತಜ್ಞರ ಜತೆ ಚರ್ಚಿಸಿದ ನಂತರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಈ ತಿಂಗಳ ೩೦ ರಂದು ಸಂಭಾವ್ಯ ಕೊರೊನಾ ೩ನೇ ಅಲೆಯನ್ನು ತಡೆಯಲು ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಚರ್ಚಿಸಲು ತಜ್ಞರ ಸಭೆ ಕರೆದಿದ್ದೇನೆ. ಈ ಸಭೆಯಲ್ಲಿ ಗಣೇಶೊತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಅನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ತಜ್ಞರ ಜತೆ ಚರ್ಚಿಸುತ್ತೇನೆ. ತಜ್ಞರ ಸಲಹೆಯಂತೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದರು. ಕೋವಿಡ್ ಕಾರಣದಿಂದ ರಾಜ್ಯಸರ್ಕಾರ ಈ ಬಾರಿ ಸಾರ್ವಜನಿಕ ಗಣೇಶೊತ್ಸವ ಆಚರಣೆಗೆ ನಿರ್ಬಂಧ ವಿಧಿಸಿತ್ತು. ಇದಕ್ಕೆ ಬಿಜೆಪಿಯ ಹಲವು ಶಾಸಕರು, ಸಂಸದರು ವಿರೋಧ ವ್ಯಕ್ತಪಡಿಸಿ ಸಾರ್ವಜನಿಕ ಗಣೇಶೊತ್ಸವ ಆಚರಣೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು.