ಲಕ್ನೋ, ; ಸರ್ಕಾರಿ ಕೆಲಸ ಮಾಡಲು ನೀವು ಯೋಗ್ಯರಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಬಲವಂತದ ನಿವೃತ್ತಿ ಪಡೆದಿದ್ದ ಮಾಜಿ ಐಪಿಎಸ್ ಅಧಿಕಾರಿಯೇ ಈಗ ಯೋಗಿ ಅವರಿಗೆ ಎದುರಾಗಿ ಸ್ಪರ್ದೆಗೆ ಮುಂದಾಗಿದ್ದಾರೆ
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಯೋಗಿ ಅವರಿಂದ ಕೆಲಸ ಕಳೆದುಕೊಂಡಿದ್ದ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರು ಇದೀಗ ಹೊಸ ಪಕ್ಷ ಸ್ಥಾಪಿಸಿದ್ದು, 2022ರ ಚುನಾವಣೆಯಲ್ಲಿ ಯೋಗಿ ಅವರ ವಿರುದ್ಧ ತೊಡೆತಟ್ಟಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ನಾನು ಅಧಿಕಾರ್ ಸೇನಾ ಎಂಬ ಸಂಘಟನೆ ಸ್ಥಾಪಿಸಿಕೊಂಡಿದ್ದೇನೆ. ಶೀಘ್ರದಲ್ಲೇ ಬೆಂಬಲಿಗರು ಮತ್ತು ಹಿತೈಷಿಗಳ ಸಭೆ ಕರೆದು ಹೊಸ ಪಕ್ಷ ಘೋಷಣೆ ಮಾಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. ತಮ್ಮ ಪತಿಯನ್ನು ಕೆಲಸದಿಂದ ತೆಗೆದುಹಾಕಿದ್ದ ಯೋಗಿ ಆದಿತ್ಯನಾಥ್ ವಿರುದ್ಧ ಗುಡುಗಿದ್ದ ಠಾಕೂರ್ ಅವರ ಪತ್ನಿ ನೂತನ್ ಠಾಕೂರ್ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ವಿರುದ್ಧ ಸ್ಪರ್ಧಿಸುವುದಾಗಿ ಸವಾಲು ಹಾಕಿದ್ದರು. ಇದೀಗ ತಮ್ಮ ಪತ್ನಿಯ ಮಾತಿನಂತೆ ಹೊಸ ಪಕ್ಷ ಸ್ಥಾಪಿಸಲು ಠಾಕೂರ್ ಮುಂದಾಗಿದ್ದು ಮುಂದಿನ ಚುನಾವಣೆಯಲ್ಲಿ ಯೋಗಿ ವಿರುದ್ಧ ನೂತನ್ ಠಾಕೂರ್ ಅವರು ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.