ನವದೆಹಲಿ: ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾಗಿ ಮೊದಲ ಬಾರಿಗೆ ಲೋಕಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಈ ವೇಳೆ ಶಿವನ ಫೋಟೋವನ್ನ ಹಿಡಿದು ಭಾಷಣಕ್ಕೆ ಮುಂದಾಗಿದ್ದು, ‘ಅಭಯ್ ಮುದ್ರೆ’ಯನ್ನ ಕಾಂಗ್ರೆಸ್ ಕೈ ಚಿಹ್ನೆಗೆ ಲಿಂಕ್ ಮಾಡಿದರು. ಆದ್ರೆ, ಇದಕ್ಕೆ ಸ್ಪೀಕರ್ ಓಂ ಬಿರ್ಲಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸದನದಲ್ಲಿ ಫಲಕಗಳು ಮತ್ತು ಛಾಯಾಚಿತ್ರಗಳನ್ನ ಪ್ರದರ್ಶಿಸುವುದನ್ನ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ಬಳಿಕ ಭಾಷಣ ಮುಂದುವರೆಸಿದ ರಾಹುಲ್ ಗಾಂಧಿ, ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸಾಚಾರ, ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಪ್ರತಿಪಕ್ಷದ ಬಿಜೆಪಿಯನ್ನ ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣರಾದರು.
ರಾಹುಲ್ ಗಾಂಧಿ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಹಿಂದೂ ಸಮುದಾಯವನ್ನ ಹಿಂಸಾತ್ಮಕ ಎಂದು ಚಿತ್ರಿಸುವುದು ಗಂಭೀರ ವಿಷಯ ಎಂದು ಹೇಳಿದರು.
ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಎನ್ಡಿಎ ಸಂಸದರ ನಡುವಿನ ವಾಕ್ಸಮರದ ಮಧ್ಯೆ, ಕೇಂದ್ರ ಸಚಿವ ಅಮಿತ್ ಶಾ ಅವರು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.