ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ತಲಸ್ಸೇರಿ ಬಳಿಯ ಜಮೀನಿನಲ್ಲಿ ಬಾಂಬ್‌ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಕುಡಕ್ಕಲಮ್‌ ಗ್ರಾಮದ ಆಯಿನಾತ್‌ ವೇಲಾಯುಧನ್‌  (86) ಮೃತ ಪಟ್ಟ ವ್ಯಕ್ತಿ. ಆಯಿನಾತ್‌ ವೇಲಾಯುಧನ್‌ ಅವರು ಜಮೀನಿನಲ್ಲಿ ತೆಂಗಿನಕಾಯಿ ಸಂಗ್ರಹಿಸಲು ಹೋದಾಗ, ಬಾಂಬ್‌ ಇದ್ದ ಪೊಟ್ಟಣ ಕಂಡಿದೆ. ಅದನ್ನು ಅವರು ಎತ್ತಿಕೊಂಡು, ತೆಗೆದು ನೋಡಿದಾಗ ಅದು ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.

ಸ್ಟೀಲ್‌ನಿಂದ ತಯಾರಿಸಿದ ಬಾಂಬ್‌ಅನ್ನು ಗಮನಿಸದ ವ್ಯಕ್ತಿಯು, ಪೊಟ್ಟಣ ತೆಗೆದು, ಅದನ್ನು ಒಡೆಯಲು ಯತ್ನಿಸಿದ್ದಾರೆ. ಆಗ ಅದು ಸ್ಫೋಟಗೊಂಡು ಆಯಿನಾತ್‌ ವೇಲಾಯುಧನ್‌ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಕಣ್ಣೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಾಂಬ್‌ಗಳ ಉತ್ಪಾದನೆ ಹಾಗೂ ಸ್ಫೋಟದಂತಹ ಪ್ರಕರಣಗಳು ಹೆಚ್ಚಾಗಿವೆ. ಆರು ತಿಂಗಳ ಹಿಂದೆಯೇ ಕಸ ಸಂಗ್ರಹಿಸುವ ವ್ಯಕ್ತಿಯೊಬ್ಬರು ಕಸ ಆಯ್ದುಕೊಳ್ಳುವಾಗ ಬಾಂಬ್‌ ಸ್ಫೋಟಗೊಂಡು ಗಾಯಗೊಂಡಿದ್ದರು.

ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರ ಮನೆಯ ಮೇಲೂ ಬಾಂಬ್‌ ದಾಳಿ ನಡೆದಿತ್ತು. ತಂಡವೊಂದು ಬಾಂಬ್‌ ತಯಾರಿಸುವಾಗಲೇ ಸ್ಫೋಟಗೊಂಡು ಸಿಪಿಎಂ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದರು. ಇಂತಹ ಪ್ರಕರಣಗಳನ್ನು ನಿಗ್ರಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.