ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅರಣ್ಯ ಅಪರಾಧ, ಕಳ್ಳಬೇಟೆಗಾರರನ್ನು ಪತ್ತೆ ಮಾಡುವಲ್ಲಿ ನಿಪುಣನಾಗಿದ್ದ ಶ್ವಾನ “ರಾಣಾ” ಮಂಗಳವಾರ ಮೃತಪಟ್ಟಿದೆ.
ಅರಣ್ಯ ಅಪರಾಧಗಳ ಪತ್ತೆ ಕಾರ್ಯದಲ್ಲಿ ನಿಪುಣನಾಗಿದ್ದ ಸುಮಾರು 10 ವರ್ಷದ ಜರ್ಮನ್ ಶಫರ್ಡ್ ತಳಿಯ ರಾಣಾ ವಯೋಸಹಜವಾಗಿ ಮೃತಪಟ್ಟಿದೆ. ಬಂಡೀಪುರ ಸಫಾರಿ ಕೌಂಟರ್ ಸಮೀಪ ರಾಣಾನಿಗೆ ಗೌರವ ಸಮರ್ಪಿಸಿ, ಮೃತ ರಾಣಾ ದೇಹದ ಮೇಲೆ ರಾಷ್ಟ್ರ ಧ್ವಜ ಹೊದಿಸಿ ಗೌರವ ಸಲ್ಲಿಸಿ ಅಂತ್ಯಕ್ರಿಯೆ ನಡೆಸಲಾಯಿತು.
ಕಾಡು ಕಳ್ಳರಿಗೆ ಸಿಂಹಸ್ವಪ್ನವಾಗಿದ್ದ ರಾಣಾನ ಬಗ್ಗೆ ಹೇಳುತ್ತಾ ಹೋದರೆ ಸಾಧನೆಗಳ ಪಟ್ಟಿಯೇ ಬಿಚ್ಚುತ್ತಾ ಹೋಗುತ್ತದೆ. ಬಂಡೀಪುರದಲ್ಲಿ ನಡೆಯುತ್ತಿದ್ದ ಹಲವು ಅಕ್ರಮ ಚಟುವಟಿಕೆಗಳನ್ನು ಬೇಧಿಸುವಲ್ಲಿ ರಾಣಾ ಸಾಹಸ ತೋರಿದ್ದನು.
ಸಾಮಾನ್ಯವಾಗಿ ಅರಣ್ಯ ಎಂದ ಮೇಲೆ ಅಲ್ಲಿ ಪ್ರಾಣಿಗಳ ಬೇಟೆ, ಮರಕಳ್ಳತನ ಮಾಡಲು ದುಷ್ಕರ್ಮಿಗಳು ಕಾಯುತ್ತಲೇ ಇರುತ್ತಾರೆ. ಅರಣ್ಯ ಸಿಬ್ಬಂದಿ ಎಷ್ಟೇ ಜಾಗರೂಕತೆಯಿಂದ ಪಹರೆ ಕಾದರೂ ಅಲ್ಲಲ್ಲಿ ಬೇಟೆ, ಕಳ್ಳತನ ನಡೆಯುತ್ತಲೇ ಇರುತ್ತಿತ್ತು. ಇಂತಹ ಸಂದರ್ಭ ರಾಣಾ ಎಂಟ್ರಿ ಕೊಟ್ಟ ಎಂದರೆ ಕಳ್ಳರು ಸಿಕ್ಕಿ ಬೀಳುವುದು ಖಚಿತವಾಗುತ್ತಿತ್ತು.
ಜರ್ಮನ್ಶಫರ್ಡ್ ಶ್ವಾನ ರಾಣಾ ಮಧ್ಯಪ್ರದೇಶದ ಭೂಪಾಲ್ನ 23ನೇ ಬೆಟಾಲಿಯನ್ ಆಫ್ ಸ್ಪೆಷಲ್ ಆಮ್ರಿಸರ್ವ ಫೋರ್ಸ್ ನಲ್ಲಿ ಕಠಿಣ ತರಬೇತಿ ಪಡೆದು ಬಂದಿತ್ತು. ಇದು ಮರಗಳ್ಳರ ಪತ್ತೆ, ಹುಲಿ, ಚಿರತೆ ಚರ್ಮ ಸಾಗಾಣಿಕೆ, ಹುಲಿ ಉಗುರು, ಆನೆ ದಂತ, ಜೆಂಕೆ, ಕಾಡು ಹಂದಿಗಳ ಇನ್ನಿತರ ಪ್ರಾಣಿಗಳನ್ನು ಬೇಟೆಯಾಡುವ ಬೇಟೆಗಾರರನ್ನು ಪತ್ತೆ ಹಚ್ಚುವಲ್ಲಿ ನಿಪುಣತೆ ಪಡೆದುಕೊಂಡಿತ್ತು.
ಇನ್ನು ಈ ರಾಣಾನನ್ನು ಬಂಡೀಪುರಕ್ಕೆ ನೀಡಿದ್ದು, ವಿಶ್ವ ವನ್ಯಜೀವಿ ನಿಧಿ ಹಾಗೂ ಟ್ರಾಫಿಕ್ ಇಂಡಿಯಾ ಸಂಸ್ಥೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ತನಗೆ ನೀಡುವ ಕಾರ್ಯವನ್ನು ಚಾಚೂ ತಪ್ಪದೆ ಮಾಡುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಅರಣ್ಯ ರಕ್ಷಕ ಪ್ರಕಾಶ್ ಎಂಬುವರು ಇದನ್ನು ಜತನದಿಂದ ನೋಡಿಕೊಳ್ಳುತ್ತಿದ್ದರು. ಬಂಡೀಪುರದ ಮೇಲುಕಾಮನಹಳ್ಳಿಯ ಎಸ್ಟಿಎಫ್ ವಸತಿಗೃಹದಲ್ಲಿ ವಾಸ್ತವ್ಯವಿದ್ದ ರಾಣಾನಿಗೆ ಬೆಳಗ್ಗೆ ಒಂದು ಲೀಟರ್ ಹಾಲು ಅಥವಾ ಮೊಸರು, ಸಂಜೆ 250 ಗ್ರಾಂ ಮಾಂಸದ ನಡುವೆ ರಾಯಲ್ ಡಾಗ್ ಫುಡ್ ನೀಡಲಾಗುತ್ತಿತ್ತು.
ರಾಣಾ ಬಂಡೀಪುರಕ್ಕೆ ಬಂದ ಬಳಿಕ ಎನ್.ಬೇಗೂರಿನಲ್ಲಿ ತೇಗದ ಮರ ಕಳ್ಳರ ಮತ್ತು ಬಂಡೀಪುರದ ವಿಂಡ್ ಫ್ಲವರ್ ಬಳಿ ಶ್ರೀಗಂಧದ ಮರಕಳ್ಳರ ಪತ್ತೆ ಹಚ್ಚಿದ್ದರೆ, ತಮಿಳುನಾಡಿನ ಮಧುಮಲೈ ಅರಣ್ಯ ವ್ಯಾಪ್ತಿಯಲ್ಲಿ ಟೀ ಎಸ್ಟೇಟ್ನಲ್ಲಿ ಕಾವಲುಗಾರನ ರುಂಡದೊಂದಿಗೆ ಪರಾರಿಯಾಗಿದ್ದ ನರಭಕ್ಷಕ ಹುಲಿಯನ್ನು ಹುಡುಕಿದ್ದು, ಹಂಚೀಪುರ ಗ್ರಾಮದಲ್ಲಿ ಅಪರೂಪದ ಕಪ್ಪು ಚಿರತೆಗೆ ವಿಷಪ್ರಾಶನ ಮಾಡಿದ್ದ ಪ್ರಕರಣ ಬೇಧಿಸಿ ವ್ಯಕ್ತಿಯನ್ನು ಬಂಧಿಸುವಲ್ಲಿಯೂ ಈತನ ಪಾತ್ರವಿತ್ತು. ಇನ್ನು ಶ್ರೀರಂಗಪಟ್ಟಣದ ಬಳಿ 60 ಕೆ.ಜಿ. ಶ್ರೀಗಂಧ ಕದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದನು. ಹೀಗೆ ಹಲವು ರೀತಿಯ ಸಾಧನೆ ಮಾಡಿ ಬಂಡೀಪುರದ ಕಾಡು ಕಳ್ಳರಿಗೆ ಸಿಂಹಸ್ವಪ್ನವಾಗಿದ್ದನು. ಆದರೆ ಇನ್ನು ಮುಂದೆ ರಾಣಾ ಬರೀ ನೆನಪು ಮಾತ್ರ.