ಚಾಮರಾಜನಗರ: ಮಹಿಳೆಯರು ಕೇವಲ ಮನೆಗೆಲಸಕ್ಕೆ ಸೀಮಿತವಾಗದೇ ಕೃಷಿಯತ್ತ ಮುಖ ಮಾಡಿ ಕೃಷಿ ಅಭಿವೃದ್ಧಿಗೆ ಸಹಕಾರ ನೀಡುಲು ಮುಂದಾಗಿರುವುದು ಸಂತಸದ ಸಂಗತಿ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಗೌಡೇಗೌಡ ಹೇಳಿದರು.
ಹನೂರು ತಾಲೂಕಿನ ರಾಮಾಪುರ ಹೋಬಳಿಯ ಪಳನಿಮೇಡು ಗ್ರಾಮದಲ್ಲಿ ಮಹಿಳಾ ರೈತ ಸಂಘದ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿ, ಕೃಷಿ ದೇಶದ ಬೆನ್ನೆಲುಬು. ಹೀಗಾಗಿ ರೈತರು ಜನರಿಗೆ ಅನ್ನದಾತರಾಗಿದ್ದು, ಎಲ್ಲ ಏಳುಬೀಳಿನ ನಡುವೆಯೂ ಶ್ರಮವಹಿಸಿ ಕೃಷಿ ಮಾಡುತ್ತಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೃಷಿಯ ಬಗ್ಗೆ ಒಲವು ತೋರುತ್ತಿರುವುದು ಖುಷಿಯ ಸಂಗತಿಯಾಗಿದೆ. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹಾಗೂ ಸ್ವಾವಲಂಬನೆ ಜೀವನ ನಡೆಸಲು ಸಹಕಾರಿಯಾಗಲಿದೆ. ಇದಕ್ಕೆ ಪೂರಕವಾಗಿ ಮಾಮರದೊಡ್ಡಿ ಗ್ರಾಮದಲ್ಲಿ 21 ಮಹಿಳೆಯರು ರೈತ ಸಂಘ ಸ್ಥಾಪಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಈ ದಿಸೆಯಲ್ಲಿ ಸಂಘದ ಅಭಿವೃದ್ಧಿ ಸದಾ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಬಸವಣ್ಣ, ಗೌರವಾಧ್ಯಕ್ಷ ಶಿವರಾಮಣ್ಣ, ಕೊಳ್ಳೇಗಾಲ ಸಂಘದ ಕಾರ್ಯದರ್ಶಿ ರವಿನಾಯ್ಕ, ಸದಸ್ಯರಾದ ಅಮ್ಜಾದ್ಖಾನ್, ಬಸವರಾಜು, ಪಳನಿಮೇಡು ಮಹಿಳಾ ರೈತ ಸಂಘದ ಅಧ್ಯಕ್ಷೆ ಕನಕ, ಕಾರ್ಯದರ್ಶಿಗಳಾದ ರಾಜು, ಕೃಷ್ಣಮೂರ್ತಿ ಹಾಗೂ ಇನ್ನಿತರರು ಇದ್ದರು.