ಬಂಟ್ವಾಳ: ಬಂಟ್ವಾಳದ ಸಣ್ಣ ಗ್ರಾಮ ಮಿತ್ತೂರು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಸದಸ್ಯರ ನೇತೃತ್ವದಲ್ಲಿ ಶಾಲೆಯ ಮಕ್ಕಳಿಗಾಗಿ ಸ್ಕೂಲ್ ಬಸ್ಸ್ ಖರೀದಿಸಿ ಮಾದರಿಯಾಗಿದ್ದಾರೆ.
4.15 ಎಕರೆ ಜಾಗದ ಪೈಕಿ 1 ಎಕರೆ ಜಾಗದಲ್ಲಿ ಕೈತೋಟದ ಅಭಿವೃದ್ಧಿಯ ಸಲುವಾಗಿ 628 ಅಡಿಕೆ ಮರಗಳನ್ನು 2017ರಲ್ಲಿ ನೆಟ್ಟು ಬೆಳೆಸಿದ್ದರು. ಕಳೆದ ವರ್ಷದಿಂದ ಅಡಿಕೆ ಫಸಲು ನೀಡಲು ಪ್ರಾರಂಭಿಸಿತ್ತು. ಮಕ್ಕಳು ಹಾಗೂ ಶಾಲೆಯ ಮೇಲಿನ ಪ್ರೀತಿಯಿಂದ ಊರಿನ ಗ್ರಾಮಸ್ಥರು ಅಡಿಕೆ ತೋಟವನ್ನು ನೋಡಿಕೊಳ್ಳುತ್ತಿದ್ದರು.
112 ವರ್ಷಗಳ ಇತಿಹಾಸವಿರುವ ನೂರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯಲ್ಲಿ 628 ಅಡಿಕೆ ಮರಗಳಿಂದ ಬಂದ ಫಸಲಿನಿಂದ ಶಾಲಾ ಬಸ್ ಖರೀದಿಸಿ ಮಕ್ಕಳ ಸಂತೋಷವನ್ನು ಇಮ್ಮಡಿಗೊಳಿಸಿದ್ದಾರೆ.
ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಈ ಶಾಲೆಗೆ ಸ್ಥಳೀಯ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಬಸ್ಗೆ ಚಾಲನೆ ನೀಡಿದ್ದರು. ಮಕ್ಕಲ್ಲಾ ಬಸ್ನಲ್ಲಿ ಬಂದು ಸಂಭ್ರಮಿಸಿದ್ದರು.
ಮೂರು ವರ್ಷಗಳ ಮುಂಚೆ ಎಸ್ಡಿಎಂಸಿಯೇ ಆಟೋ ರಿಕ್ಷಾ ಬಾಡಿಗೆಗೆ ಗೊತ್ತು ಮಾಡಿ ಮಕ್ಕಳನ್ನು ಕರೆತರುವ ವ್ಯವಸ್ಥೆ ಮಾಡಿತ್ತು. ಈಗ ಶಾಲಾ ಬಸ್ ವ್ಯವಸ್ಥೆ ಆಗಿರುವುದರಿಂದ ಊರಿನ ಸುತ್ತಮುತ್ತಲಿನ ಮಕ್ಕಳನ್ನು ಎರಡು ಟ್ರಿಪ್ ಮಾಡುವ ಮೂಲಕ ಮಕ್ಕಳನ್ನು ಶಾಲೆಗೆ ಕೆರೆತರಲು ಸಾಧ್ಯವಾಗುತ್ತಿದೆ.
ಮಿತ್ತೂರಿನ ಈ ಸರ್ಕಾರಿ ಶಾಲೆಯ ಸುತ್ತಲೂ ಹಲವಾರು ಖಾಸಗಿ ಶಾಲೆಗಳು ಪ್ರಾರಂಭವಾಗಿದ್ದರೂ, ಈ ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಯಾವತ್ತೂ ಕಡಿಮೆಯಾಗಿಲ್ಲ ಎನ್ನುತ್ತಾರೆ ಅಲ್ಲಿನ ಶಿಕ್ಷಕರು.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಶಿಕ್ಷಕ ಸಂಜೀವ ಎನ್. ‘ಸರ್ಕಾರಿ ಶಾಲೆಗಳು ಉಳಿಯಬೇಕು ಎನ್ನುವ ದೃಷ್ಟಿಯಿಂದ ಶಿಕ್ಷಣ ಇಲಾಖೆ, ಪೋಷಕರು, ಎಸ್ಡಿಎಮ್ಸಿ, ಶಿಕ್ಷಕ ವೃಂದ ಹಾಗೂ ಹಿರಿಯ ವಿದ್ಯಾರ್ಥಿಗಳು ಸೇರಿ ನಾಲ್ಕು ವರ್ಷಗಳ ಹಿಂದೆ ತೊಟ ನಿರ್ಮಿಸಿದ್ದೇವು, ಈ ನಿರ್ಮಾಣಕ್ಕೆ ಸುಮಾರು 6 ಲಕ್ಷ ರೂಪಾಯಿ ವೆಚ್ಚವಾಗಿದೆ. ವರ್ಷಕ್ಕೆ ಸುಮಾರು ಎರಡೂವರೆ ಲಕ್ಷದಷ್ಟು ಆದಾಯ ಸಿಗುತ್ತಿದೆ. ಈ ಆದಾಯದಿಂಲೇ ನಾವು ಬಸ್ ಖರೀದಿಗೆ ಮುಂದಾಗಿದ್ದೇವೆ’ ಎಂದರು.