ಬಂಟ್ವಾಳ: ಬೃಹತ್ ಮರವೊಂದು ಉರುಳಿ ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಲಕ್ಷಣಕಟ್ಟೆ ಎಂಬಲ್ಲಿ ಶನಿವಾರ ಮಧ್ಯಾಹ್ನದ ವೇಳೆ ನಡೆದಿದೆ. ಮರ ಧರೆಗೆ ಉರುಳುತ್ತಿದ್ದಂತೆ ಸಮಯ ಪ್ರಜ್ಞೆ ಮೆರೆದ ಕಾರು ಚಾಲಕ ಕಾರನ್ನು ಹಿಂದಕ್ಕೆ ಚಲಾಯಿಸಿದ್ದರಿಂದ ಭಾರೀ ಅವಘಡ ತಪ್ಪಿದೆ.
ಕಾರಿನಲ್ಲಿ ಮೂವರು ಮಹಿಳೆಯರು ಮತ್ತು ಚಾಲಕ ಇದ್ದರು. ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಜಿಪನಡುನಿಂದ ನೇತ್ರಾವತಿ ನದಿ ಸಂಪರ್ಕಿಸುವ ರಸ್ತೆಯಲ್ಲಿರುವ ಲಕ್ಷಣಕಟ್ಟೆ ಎಂಬಲ್ಲಿನ ಕಟ್ಟೆಯಲ್ಲಿದ್ದ ಈ ಮರದ ಕೊಂಬೆಯೊಂದು ಕೆಲವು ದಿನಗಳ ಹಿಂದೆ ಬಿದ್ದಿದ್ದು, ಇಂದು ಮರ ಉರುಳಿ ಬಿದ್ದಿದೆ.