ಕರ್ನಾಟಕದಲ್ಲಿ ಕಾವೇರಿ ನೀರಿನ ವಿವಾದ ದಿನದದಿಂದ ದಿನಕ್ಕೆ ಕಾವೇರುತ್ತಿದೆ. ಪ್ರತಿಭಟನೆ , ರಸ್ತೆ ತಡೆ ಇತ್ಯಾದಿ, ನಡೆಯುತ್ತಿದ್ದೆ. ಕಾವೇರಿ ನೀರಿನ ಸಮಸ್ಯೆಯು ಕರ್ನಾಟಕ ಮತ್ತು ತಮಿಳುನಾಡು ನಡುವೆ ದಶಕಗಳಿಂದ ವಿವಾದಾಸ್ಪದ ವಿಷಯವಾಗಿ ಉಳಿದುಕೊಂಡಿದೆ. ಲಕ್ಷಾಂತರ ಜನರಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಪ್ರಮುಖ ಮೂಲವಾಗಿರುವ ಕಾವೇರಿ ನದಿಯ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಉಭಯ ರಾಜ್ಯಗಳ ನಡುವೆ ಸಮಸ್ಯೆ ಬಿಗಡಾಯಿಸಿದೆ. ಈ ನಿಟ್ಟಿನಲ್ಲಿ ದಶಕಗಳಿಂದ ಬಗೆಹರಿಯದೇ ಕಗ್ಗಂಟಾಗಿರುವ ಜಲವಿವಾದ ಕಿರುನೋಟ ಇಲ್ಲಿದೆ. . .
ಕಾವೇರಿ ನದಿಯ ಹರಿವು ಬ್ರಿಟಿಷ್ ರಾಜ್ ಅಡಿಯಲ್ಲಿದ್ದ ಮದ್ರಾಸ್ ಪ್ರಾಂತ್ಯ ಮತ್ತು ಮೈಸೂರು ರಾಜ್ಯದ ನಡುವೆ ನೀರಿನ ಹಂಚಿಕೆ ಬಗ್ಗೆ ಎರಡು ರಾಜ್ಯಗಳ ನಡುವೆ ವಿವಾದ 1892 ರಲ್ಲಿ ಆರಂಭವಾಯಿತು. 1910ರಲ್ಲಿ ಎರಡೂ ಪ್ರಭುತ್ವಗಳು ಕಾವೇರಿ ನದಿಯ ಅಣೆಕಟ್ಟಿನ ನಿರ್ಮಾಣ ಯೋಜನೆಯನ್ನು ಆರಂಭಿಸಿದವು.
ಇನ್ನು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುವುದಾದರೇ, ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ಕರ್ನಾಟಕದ ನೀರಿನ ಪಾಲನ್ನು ಹೆಚ್ಚಿಸಿತು ಮತ್ತು ತಮಿಳುನಾಡಿಗೆ 177.25 ಟಿಎಂಸಿ ಬಿಡುಗಡೆ ಮಾಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿದೆ.
ಕರ್ನಾಟಕ ಸರ್ಕಾರ 24 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಬಿಡುಗಡೆ ಮಾಡಬೇಕೆಂದು ಆದೇಶ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದು, ಇಂದು ವಿಚಾರಣೆ ನಡೆಸಬೇಕಾಗಿತ್ತು. ಆದರೆ ಇಂದು (ಸೆ.1) ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿದೆ.
ಕಾವೇರಿ ನದಿ ನೀರು ವಿವಾದ ನ್ಯಾಯಮಂಡಳಿಯು 2007ರಲ್ಲಿ ಇಡೀ ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರ್ಷಿಕ 419 ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ ನೀರು ತಮಿಳುನಾಡಿಗೆ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ ಹಾಗೂ ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 7 ಟಿ.ಎಂ.ಸಿ. ನೀರು ಹಂಚಿಕೆ ಮಾಡಿದ ನಂತರ ಕರ್ನಾಟಕ ಮತ್ತು ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.
ಒಂದಷ್ಟು ವರ್ಷಗಳಿಂದ ಸರಿಯಾದ ಸಮಯಕ್ಕೆ ಮಳೆಯಾಗುತ್ತಿಲ್ಲ ಹೀಗಾಗಿ. ಅತ್ತ ತಮಿಳುನಾಡು ನೀರಿಗಾಗಿ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಮುಂದೆ ಸಲ್ಲಿಸಿದೆ. ಇದರ ನಡುವೆ ಆ.30 ರಂದು ನಡೆದ ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತೀ ದಿನವೂ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ಇದರಲ್ಲಿ ಖುಷಿ ಪಡುವ ವಿಚಾರವೆಂದರೇ, ಆರಂಭದಲ್ಲಿ ತಮಿಳುನಾಡು ಕೇಳಿದ ರೀತಿ 24 ಸಾವಿರ ಕ್ಯುಸೆಕ್ ನೀರು ಬಿಡುತ್ತಿಲ್ಲ.
ಕಾವೇರಿ ವಿಚಾರದಲ್ಲಿ ಪ್ರತೀ ವರ್ಷವೂ ತಮಿಳುನಾಡಿನ ಕಿರಿಕಿಯನ್ನು ಅನುಭವಿಸಿಕೊಂಡು ಬರುತ್ತಿರುವ ಕರ್ನಾಟಕ ಸುಪ್ರೀಂ ಮತ್ತು ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಮುಂದೆ ಅಹವಾಲು ಸಲ್ಲಿಸುತ್ತಲೇ ಇದೆ. ಇದುವರೆಗೆ ಇದಕ್ಕೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಆದರೆ ನೀರಿನ ಸಮಸ್ಯೆ ಬಂದಾಗ ಈ ವಿಚಾರ ಮುನ್ನಲೇಗೆ ಬರುತ್ತಲೇ ಇದೆ.
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೇ, ಬರದ ವರ್ಷಗಳಲ್ಲಿ ಕರ್ನಾಟಕ ಕಾವೇರಿ ನದಿಯಿಂದ ನೀರನ್ನು ತಮಿಳುನಾಡಿಗೆ ಹರಿಸದಿರುವುದಕ್ಕೆ ಮುಖ್ಯ ಕಾರಣವೆಂದರೇ, ನೀರು ಬಿಟ್ಟರೆ ರಾಜ್ಯದ ರೈತರಿಗೆ ಸಂಕಷ್ಟ ಉಂಟಾಗಬಹುದು ಎಂಬ ಆತಂಕ. ಅಲ್ಲದೇ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದು ಎಂಬ ಮಂದಾಲೋಚನೆಯಿಂದ ತಮಿಳುನಾಡಿಗೆ ನೀರು ಹರಿಸುವುದರ ಕುರಿತು ಇಷ್ಟೊಂದು ಸಮಸ್ಯೆ ಎದುರಾಗಿದೆ. ಆದರೆ ಕರ್ನಾಟಕದಿಂದ ನೀರು ಪಡೆದೇ ತೀರುತ್ತೇವೆ ಎಂದು ತಮಿಳುನಾಡು ಕಾದು ಕುಳಿತಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ರೈತರು ನಿರಂತರ ಪ್ರತಿಭಟನೆ ನಡೆಸಿದ್ದಾರೆ. ಅತ್ತ ಮಂಗಳವಾರ ರಾತ್ರಿಯಿಂದಲೇ ಕೆ ಆರ್ ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಬಿಡಲಾಗುತ್ತಿದೆ.
ಇಂದು ಡ್ಯಾಂನಿಂದ 7,180 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. 1500 ಕ್ಯೂಸೆಕ್ ಕುಡಿಯುವ ನೀರಿಗೆ ಬಿಡುಗಡೆ ಮಾಡಿದೆ. 5,680 ಕ್ಯೂಸೆಕ್ ನೀರು ಮೆಟ್ಟೂರು ಡ್ಯಾಂಗೆ ಬಿಡುಗಡೆ ಮಾಡಲಾಗಿದೆ.
ಸದ್ಯ ಡ್ಯಾಂನ ಹೊರ ಹರಿವು 7,230 ಕ್ಯೂಸೆಕ್ ಇದೆ. ಇನ್ನು ಡ್ಯಾಂಗೆ ಹರಿದು ಬರ್ತಿದೆ 1535 ಕ್ಯೂಸೆಕ್ ಒಳಹರಿವು ಬರುತ್ತಾ ಇದೆ. ಈಗ ಡ್ಯಾಂನಲ್ಲಿ 23.079 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ.
ಕಾವೇರಿ ನದಿಯ ಉಪನದಿಗಳು, ಹಾರಂಗಿ, ಕಬಿನಿ, ಶಿಂಷಾ, ಹೇಮಾವತಿ, ಭವಾನಿ,ಲಕ್ಷಣ ತೀರ್ಥ, ಲೋಕಪಾವನಿ, ನೋಯಲ್ಸು, ವರ್ಣವತಿ, ಅರ್ಕಾವತಿ, ವೃಷಭವತಿ
ಇನ್ನು ಕರ್ನಾಟಕದಲ್ಲಿ ಕಾವೇರಿ ನದಿಗೆ ಕಟ್ಟಿರುವ ಅಣೆಕಟ್ಟುಗಳೆಂದರೆ, ಕೆ. ಆರ್. ಎಸ್ ಅಣೆಕಟ್ಟು – ಮಂಡ್ಯ, ಗೊರೂರು ಅಣೆಕಟ್ಟು – ಹಾಸನ., ಕಬಿನಿ ಜಲಾಶಯ – ಮೈಸೂರು(ಎಚ್ ಡಿ ಕೋಟೆ)., ಹಾರಂಗಿ ಜಲಾಶಯ -ಕೊಡಗು., ಮೇಕೆದಾಟು ಅಣೆಕಟ್ಟು – ರಾಮನಗರ.
ತಮಿಳುನಾಡು ರಾಜ್ಯದಲ್ಲಿ ಕಾವೇರಿ ನದಿಗೆ ಕಟ್ಟಿರುವ ಅಣೆಕಟ್ಟುಗಳೆಂದರೆ ಮೆಟ್ಟೂರು ಜಲಾಶಯ., ಸ್ಟಾಂಪ್ಲಿ ಜಲಾಶಯ., ಗ್ಯಾಂಡ್ ಜಲಾಶಯ., ಭವಾನಿ ಸಾಗರ ಜಲಾಶಯ.
ಬಗೆಹರಿಯದ ಇತರ ನದಿ ವಿವಾದಗಳು
ನರ್ಮದಾ ನದಿ ವಿವಾದ:
ನರ್ಮದಾ ನದಿ ನೀರಿನ ಹಂಚಿಕೆ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳ ನಡುವಿನ ವ್ಯಾಜ್ಯವಾಗಿದೆ. ಮಧ್ಯಪ್ರದೇಶದ ಅಮರ್ಕಾಂತಕ್ನಲ್ಲಿ ಹುಟ್ಟಿ ಹರಿಯುವ ಈ ನದಿಯ ಉದ್ದ 1,300 ಕಿ.ಮೀ. ಮತ್ತು ನದಿಪಾತ್ರ 98,796 ಚದರ ಕಿ.ಮೀ. ಇದೆ. ನರ್ಮದಾ ನದಿ ವಿವಾದವು ಮಹಾರಾಷ್ಟ್ರ, ಗುಜರಾತ್ ಮಾತ್ರವಲ್ಲದೇ ಮಧ್ಯಪ್ರದೇಶಕ್ಕೂ ಸಹ ಸಂಬಂಧಿಸಿದೆ. ಸರ್ದಾರ್ ಸರೋವರ್ ಅಣೆಕಟ್ಟು ನರ್ಮದಾ ನದಿಯ ಮೇಲೆ ಕಟ್ಟಲ್ಪಟ್ಟಿದೆ.
1956ರ ಅಂತರರಾಜ್ಯ ಜಲ ವಿವಾದ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ, ಕೇಂದ್ರ ಸರ್ಕಾರವು ನರ್ಮದಾ ಜಲ ವಿವಾದ ನ್ಯಾಯಾಧೀಕರಣವನ್ನು ಸ್ಥಾಪಿಸಿತು. ನ್ಯಾಯಮೂರ್ತಿ ವಿ. ರಾಮಸ್ವಾಮಿ ಅಧ್ಯಕ್ಷರಾಗಿದ್ದರು. ರಾಮಸ್ವಾಮಿ ನ್ಯಾಯಾಧೀಕರಣ ಡಿಸೆಂಬರ್ 7, 1979 ರಂದು ತೀರ್ಪು ನೀಡಿತು. ಇದು ಸಹ ಇನ್ನೂ ವಿವಾದಾತ್ಮಕವಾಗಿದೆ.
ಯಮುನಾ ನದಿ ವಿವಾದ:
ಯಮುನಾ ನದಿ ನೀರಿನ ವಿವಾದವು ತುಂಬಾ ಹಳೆಯದು. ಇದು ಒಟ್ಟು ಐದು ರಾಜ್ಯಗಳಿಗೆ ಸಂಬಂಧಿಸಿದೆ. ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲಪ್ರದೇಶ ರಾಜ್ಯಗಳನ್ನು ಸಂಪರ್ಕಿಸುತ್ತದೆ. 1954 ರಲ್ಲಿ ಮೊದಲನೆಯದಾಗಿ ಹರಿಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳ ನಡುವೆ ಯಮುನಾ ನದಿ ಒಪ್ಪಂದವಾಯಿತು.
ಯಮುನಾ ನದಿಯಲ್ಲಿ ಹರಿಯಾಣದ ಪಾಲು ಶೇ. 77 ರಷ್ಟು ಮತ್ತು ಉತ್ತರ ಪ್ರದೇಶದ ಪಾಲು ಶೇ.23 ರಷ್ಟಿತ್ತು. ರಾಜಸ್ಥಾನ, ದೆಹಲಿ ಮತ್ತು ಹಿಮಾಚಲಪ್ರದೇಶದ ಉಲ್ಲೇಖಗಳು ಬಂದಿಲ್ಲ. ಈ ರಾಜ್ಯಗಳು ತಮ್ಮ ಪಾಲಿನ ಬೇಡಿಕೆಗಾಗಿ ತೀವ್ರ ವಿವಾದವನ್ನು ಪ್ರಾರಂಭಿಸಿವೆ.
ಸೋನಾ ನದಿ ವಿವಾದ:
ಸೋನಾ ನದಿ ನೀರಿನ ವಿವಾದವು ಮೂರು ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವೆ ಇದೆ. 1973 ರಲ್ಲಿ, ಸೋನಾ ಮತ್ತು ರಿಹಂದ್ ನದಿಗಳ ನಡುವಿನ ನೀರಿನ ವಿವಾದವನ್ನು ಪರಿಹರಿಸಲು ಬನ್ಸಾಗರ್ ಒಪ್ಪಂದವನ್ನುಮಾಡಿಕೊಳ್ಳಲಾಯಿತು.
ಆರಂಭದಿಂದಲೂ ಈ ಒಪ್ಪಂದವನ್ನು ಸರಿಯಾಗಿ ಜಾರಿಗೊಳಿಸಿಲ್ಲ ಎಂದು ಬಿಹಾರ ಆರೋಪಿಸಿದೆ. ಈ ಒಪ್ಪಂದದ ಪ್ರಕಾರ, ರಿಹಾಂಡ್ ನದಿಯ ಸಂಪೂರ್ಣ ನೀರನ್ನು ಬಿಹಾರಕ್ಕೆ ಹಂಚಲಾಗಿತ್ತು. ಆದರೆ ಎನ್ಟಿಪಿಸಿ ಮತ್ತು ಉತ್ತರ ಪ್ರದೇಶ ಸರಕಾರವು ಬಿಹಾರ್ ನದಿಯ ಹಿಂಭಾಗದ ಜಲಾಶಯದಿಂದ ನೀರು ಬಳಸುತ್ತಿವೆ.
ಕೃಷ್ಣಾ ನದಿ ವಿವಾದ:
ಕೃಷ್ಣಾ ನದಿ ನೀರು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ವಿವಾದಕ್ಕೆ ಕಾರಣವಾಗಿದೆ. ಈ ನದಿಯು ಮಹಾಬಲೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರದ ಸತಾರ ಮತ್ತು ಸಾಂಗ್ಲಿ ಜಿಲ್ಲೆಗಳ ನಡುವೆ ಹಾಗೂ ಕರ್ನಾಟಕ, ದಕ್ಷಿಣ ಆಂಧ್ರಪ್ರದೇಶದ ನಡುವೆ ಹರಿಯುತ್ತದೆ. ಕೃಷ್ಣಾ ನದಿಯು ಕರ್ನಾಟಕದ 60 ಪ್ರತಿಶತದಷ್ಟು 3 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.
ಈ ನದಿಯ ವಿವಾದವನ್ನು ಪರಿಹರಿಸಲು, 1969 ರಲ್ಲಿ ಬಚ್ಚವತ್ ಟ್ರಿಬ್ಯೂನಲ್ ಸ್ಥಾಪನೆಯಾಯಿತು. ಅದು 1976 ರಲ್ಲಿ ತೀರ್ಪು ನೀಡಿತು. ಈ ತೀರ್ಪಿನಲ್ಲಿ ಕರ್ನಾಟಕ 700 ಬಿಲಿಯನ್ ಕ್ಯೂಸೆಕ್, ಆಂಧ್ರ ಪ್ರದೇಶ 800 ಬಿಲಿಯನ್ ಕ್ಯೂಸೆಕ್ ಮತ್ತು ಮಹಾರಾಷ್ಟ್ರ 560 ಬಿಲಿಯನ್ ಕ್ಯೂಸೆಕ್ ನೀರನ್ನು ಬಳಸಲು ಅನುಮತಿ ನೀಡಿತು.
ಗೋದಾವರಿ ನದಿ ನೀರಿನ ವಿವಾದ:
ಗೋದಾವರಿ ಭಾರತದ ದೊಡ್ಡ ನದಿ. ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಹುಟ್ಟುತ್ತದೆ. ಅದರ ಉದ್ದ 1,465 ಕಿ.ಮೀ . ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಒಡಿಶಾ ಮತ್ತು ಆಂಧ್ರಪ್ರದೇಶದ ನಡುವೆ ಗೋದಾವರಿ ನೀರಿಗಾಗಿ ಸಾಕಷ್ಟು ವಿವಾದಗಳಾಗಿವೆ. ಇದನ್ನು ಪರಿಹರಿಸಲು, ಏಪ್ರಿಲ್ 1969 ರಲ್ಲಿ ಸರ್ಕಾರ ಸಮಿತಿಯು ರಚನೆಯಾಯಿತು. ಈ ಸಂದರ್ಭದಲ್ಲಿ, ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದರೂ, ಗೋದಾವರಿ ನದಿ ನೀರಿನ ವಿವಾದ ಸಂಪೂರ್ಣವಾಗಿ ಬಗೆಹರಿದಿಲ್ಲ.