ಮಂಗಳೂರು: ಉಪ್ಪಿನಕಾಯಿ ಎಂದ ಕೂಡಲೇ ಬಾಯಲ್ಲಿ ನೀರೂರುತ್ತೆ. ಅದು ಮಾವಿನಕಾಯಿ, ನಿಂಬೆ ಹಣ್ಣು, ನೆಲ್ಲಿಕಾಯಿ ಯಾವುದೇ ಉಪ್ಪಿನಕಾಯಿ ಇರಲಿ, ಟೇಸ್ಟ್ ಮಾತ್ರ ಬಾಯಲ್ಲಿ ನೀರೂರುವಂತಿರುತ್ತೆ. ಇನ್ನು ಬೇಸಿಗೆಯ ದಿನಗಳಲ್ಲಿ, ಹೆಚ್ಚಿನ ಜನರು ಇಡೀ ವರ್ಷಕ್ಕೆ ಸಾಕಾಗುವಷ್ಟು ಉಪ್ಪಿನಕಾಯಿ ತಯಾರಿಸುತ್ತಾರೆ.
ಮಾರುಕಟ್ಟೆಗಳಲ್ಲಿ ಅನೇಕ ರೀತಿಯ ಉಪ್ಪಿನಕಾಯಿಗಳು ಲಭ್ಯವಿವೆ. ಮಾವಿನಹಣ್ಣಿನಿಂದ ಹಿಡಿದು ಹಸಿಮೆಣಸಿನಕಾಯಿ, ಹಲಸು, ಕೆಂಪು ಮೆಣಸಿನಕಾಯಿ, ಕ್ಯಾರೆಟ್, ಮೂಲಂಗಿಯವರೆಗಿನ ವಿವಿಧ ಉಪ್ಪಿನಕಾಯಿ ಲಭ್ಯವಿದೆ. ಆದರೆ ಮನೆಯಲ್ಲಿ ತಯಾರಿಸಿದ ಮಾವಿನ ಉಪ್ಪಿನಕಾಯಿಯನ್ನು ತಿನ್ನುವ ಮಜಾನೆ ಬೇರೆ ಆಗಿದೆ ಮತ್ತು ವಿಶೇಷವಾಗಿ ಹಳ್ಳಿಯಲ್ಲಿ ಅಜ್ಜಿ ತಯಾರಿಸುತ್ತಿದ್ದ ಉಪ್ಪಿನಕಾಯಿ ಬಾಯಲ್ಲಿ ನೀರೂರಿಸುತ್ತೆ.
ಇಂದಿನ ಬಿಡುವಿಲ್ಲದ ಜೀವನದಲ್ಲಿ, ಯಾರೂ ಕಷ್ಟಪಟ್ಟು ಕೆಲಸ ಮಾಡಲು ಬಯಸೋದಿಲ್ಲ. ಈ ಕಾರಣದಿಂದಾಗಿ ಜನ ಮಾರ್ಕೆಟ್ ನಿಂದಲೇ ಉಪ್ಪಿನಕಾಯಿ ಖರೀದಿಸುತ್ತಾರೆ. ಗ್ರಾಹಕ ಅಂಗಡಿಯಲ್ಲಿ ಉಪ್ಪಿನ ಕಾಯಿ ಕೇಳಿದರೆ “ಯಾವುದರ ಉಪ್ಪಿನ ಕಾಯಿ?’ ಎಂದು ಕೇಳುವ ಮಟ್ಟಕ್ಕೆ ಉಪ್ಪಿನ ಕಾಯಿ ಉದ್ಯಮ ಬೆಳೆದು ಹೆಮ್ಮರವಾಗಿದೆ.
ಇದೀಗ ಕೆಲವೇ ದಿನಗಳಲ್ಲಿ ಈ ಉದ್ಯಮ ಕ್ಷೇತ್ರಕ್ಕೆ ಹೊಸ ಉತ್ಪನ್ನವೊಂದು ಸೇರ್ಪಡೆ ಆಗಲಿದೆ. ಅದುವೇ ತೆಂಗಿನ ಕಾಯಿಯ ಉಪ್ಪಿನ ಕಾಯಿ. ಇಲ್ಲಿ ಹದವಾಗಿ ಬಲಿತ ತೆಂಗಿನ ಕಾಯಿ ಉಪ್ಪಿನ ಕಾಯಿಗೆ ಬಳಸಲಾಗುತ್ತದೆ. ದ.ಕ. ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪೆನಿಯ ಉತ್ಪನ್ನ ಇದಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕ ಕಂಪನಿ 2021ರ ಸೆಪ್ಟಂಬರ್ ತಿಂಗಳಲ್ಲಿ ಪ್ರಾರಂಭಗೊಂಡಿದೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಿಸಲಿದೆ.
ಕಂಪನಿ ಈಗಾಗಲೇ 17,000 ಅಧಿಕ ಸದಸ್ಯರನ್ನು ಹೊಂದಿದೆ. ಸದಸ್ಯತ್ವಕ್ಕೆ ರೂ.250 ಮತ್ತು ಪಾಲು ಬಂಡವಾಳಕ್ಕೆ ರೂ.750ನ್ನು ಕಂಪನಿ ನಿಗದಿ ಪಡಿಸಿದೆ. ಕಂಪನಿ ಉತ್ಪಾದಿಸುವ ಮೌಲ್ಯವರ್ಧಿತ ಉತ್ಪನ್ನಗಳು ಸದಸ್ಯರಿಗೆ ಶೇ.10ರಿಂದ 15 ರಿಯಾಯಿತಿ ದೊರೆಯಲಿವೆ. ಪುತ್ತೂರಿನಲ್ಲಿ ಕಂಪೆನಿಯ ಉತ್ಪಾದನಾ ಘಟಕ ಶೀಘ್ರ ಆರಂಭಗೊಳ್ಳಲಿದೆ. ಮೂಡಬಿದ್ರೆಯಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ‘ಕೋಕೊ ಕ್ಯಾಂಪಸ್’ ರೂಪುಗೊಳ್ಳಲಿದೆ.
ನ್ಯೂಸ್ ಕನ್ನಡದೊಂದಿಗೆ ಮಾತನಾಡಿದ ತೆಂಗು ರೈತ ಉತ್ಪಾದಕರ ಕಂಪನಿ, ದ.ಕ ಜಿಲ್ಲೆ ಅಧ್ಯಕ್ಷ ಎಂ.ಪ್ರಸಾದ್ ಶೆಟ್ಟಿ ಇವರು ತೆಂಗಿನ ಕಾಯಿಗೆ ಬೇಡಿಕೆ ಹೆಚ್ಚಾಗ ಬೇಕೆಂದರೆ ಹೊಸ ಹೊಸ ರೀತಿಯ ಮೌಲ್ಯ ವರ್ಧಿತ ಉತ್ಪನಗಳನ್ನು ಮಾಡಬೇಕು. ತೆಂಗಿನ ಕಾಯಿಯಿಂದ ಎಣ್ಣೆತೆಗೆದು ಬಳಕೆ ಮಾಡುತ್ತಾರೆ. ಸ್ವಲ್ಪ ಪ್ರಮಾಣದಲ್ಲಿ ಪೌಡರ್ ಮಾಡುತ್ತಾರೆ. ಆದರೆ ತೆಂಗಿನ ಕಾಯಿಯಿಂದ ಮತ್ತಷ್ಟು ಮೌಲ್ಯ ವರ್ಧಿತ ಉತ್ಪನಗಳನ್ನು ಮಾಡಲು ಅವಕಾಶ ಇದೆ. ಆ ಉದ್ದೇಶದಿಂದ ತೆಂಗಿನಕಾಯಿ ಉಪ್ಪಿನಕಾಯಿಯ ಉಪ್ಪಿನಕಾಯಿಯನ್ನು ತಯಾರಿಸಲು ನಮ್ಮ ಸಂಸ್ಥೆ ಮುಂದಾಗಿದೆ. ಇದರಿಂದ ತೆಂಗು ಬೆಳೆಯುವ ರೈತರಿಗೆ ಉಪಯೋಗ ಆಗಲಿದೆ. ಭವಿಷ್ಯದಲ್ಲಿ ತೆಂಗು ಕೃಷಿಕರಿಗೆ ಭದ್ರತೆ ಒದಗಿಸುವುದು ಮತ್ತು ಇಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ರೈತರಿಂದ ತೆಂಗಿನಕಾಯಿಯನ್ನು ಉತ್ತಮ ಬೆಲೆಗೆ ನೇರ ಖರೀದಿ ಮಾಡುವ ಉದ್ದೇಶ ಹೊಂದಲಾಗಿದೆ. ಕರಾವಳಿ ಭಾಗದ ತೆಂಗು ಬೆಳೆಗಾರರನ್ನು ಆಧರಿಸುವುದು ಮತ್ತು ಅವರ ಉತ್ಪನ್ನವನ್ನು ನ್ಯಾಯವಾದ ಬೆಲೆಗೆ ಖರೀದಿಸುವುದು ಕಂಪನಿಯ ಉದ್ದೇಶವಾಗಿದೆ. ಇದರೊಂದಿಗೆ ಸ್ಥಳೀಯರಿಗೆ ಉದ್ಯೋಗ ಒದಗಿಸುವುದು ನಮ್ಮ ಗುರಿಯಾಗಿದೆ. ಇದರ ಜೊತೆಗೆ ತೆಂಗಿನಕಾಯಿ ಹಪ್ಪಳ ಮತ್ತು ತೆಂಗಿನಕಾಯಿ ರಸ್ಕ್ ಪರಿಚಯಸಲಿದ್ದೇವೆ ಎಂದು ಹೇಳಿದರು.