ಭಾರತೀಯ ಸಂಸ್ಕೃತಿಯಲ್ಲಿ ಸುಮಂಗಲಿಯರ ಸಂಕೇತ ಎಂದೆನಿಸಿಕೊಳ್ಳುವ ಐದು ಮುತ್ತುಗಳಲ್ಲಿ ಕಾಲುಂಗುರವೂ ಒಂದಾಗಿದ್ದು, ಮಹಿಳೆಯರ ವೈವಾಹಿಕ ಬದುಕಿನಲ್ಲಿ ಮಾಂಗಲ್ಯ, ಕರಿಮಣಿಯಂತೆ ಕಾಲುಂಗುರವು ಮಹತ್ವದ ಸ್ಥಾನವನ್ನು ಪಡೆದಿದೆ.
ನಮ್ಮ ಸಂಪ್ರದಾಯದಲ್ಲಿ ಹಣೆಗೆ ಕುಂಕುಮ, ಕೈಗೆ ಬಳೆ, ಮೂಗುತಿ ಹಾಗೂ ಕಿವಿಯೋಲೆ ಧರಿಸಿದರೆ ಆಕೆ ಮುತ್ತೈದೆ ಎಂದೆನಿಸಿಕೊಳ್ಳತ್ತಾಳೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಿರಿಯರು ಮಾಡಿದ ಇಂತಹ ಸಂಪ್ರದಾಯ ಆರೋಗ್ಯಕ್ಕೆ ಪೂರಕವಾಗಿರುವಂತಹ ಸಂಪ್ರದಾಯ.
ಮದುವೆಯ ದಿನದಂದು ಕಾಲುಂಗುರವನ್ನು ತೊಡಿಸುವ ಶಾಸ್ತ್ರವಿದೆ. ಹೆಣ್ಣಿನ ತಾಯಿ, ಹಿರಿಯ ಸುಮಂಗಲಿಯರು, ಮದುಮಗ, ಸೋದರಮಾವ, ಅತ್ತೆ ಹೀಗೆ ಅವರವರ ಸಂಪ್ರದಾಯಕ್ಕೆ ತಕ್ಕಂತೆ ಮದುಮಗಳಿಗೆ ಉಂಗುರ ತೊಡಿಸುವ ಶಾಸ್ತ್ರ ಇದೆ. ಇನ್ನೂ ಕೆಲವು ಸಂಪ್ರದಾಯದಲ್ಲಿ ಮದುಮಗನೂ ತೋರು ಬೆರಳಿಗೆ ಒಂದು ಸುತ್ತಿನ ಕಾಲುಂಗುರ ಹಾಕುವ ಪದ್ಧತಿ ಇದೆ.
ಸಾಮಾನ್ಯವಾಗಿ ಕಾಲುಂಗುರ ಹೆಬ್ಬೆರೆಳಿನ ಪಕ್ಕದ ಬೆರೆಳಿಗೆ ತೊಡುತ್ತಾರೆ. ಮದುವೆಯಾದ ಬಳಿಕ ಧರಿಸುವ ಬೆಳ್ಳಿ ಕಾಲುಂಗುರ ಸಾಂಪ್ರದಾಯಿಕ, ಫ್ಯಾಷನ್ ಮತು ಅಲಂಕಾರಿಕಾ ಆಭರಣ. ಹೆಣ್ಣು ಮಕ್ಕಳು ಕಾಲಕ್ಕೆ ತಕ್ಕಂತೆ ತಮ್ಮ ಫ್ಯಾಷನ್ಗಳನ್ನು ಟ್ರೆಂಡ್ಗೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಾರೆ. ಬೆಳ್ಳಿಯ ಕಾಲುಂಗುರದ ಬದಲು ವೈಟ್ ಮೆಟಲ್, ಅಥವಾ ಆನ್ಯ ಲೋಹದಿಂದ ತಯಾರಿಸಲ್ಪಟ್ಟ ಕಾಲುಂಗುರಗಳತ್ತವೂ ಆಕರ್ಷಿತರಾಗುತ್ತಿದ್ದಾರೆ.
ಕಾಲುಂಗುರಗಳು ಹೆಚ್ಚಾಗಿ ಬೆಳ್ಳಿಯದ್ದೇ ಆಗಿರುತ್ತದೆ. ಆದರೆ ಇಂದು ಕೆಲವರು ಬಂಗಾರದ ಕಾಲುಂಗುರವನ್ನು ತೋಡುತ್ತಾರೆ. ಅದು ಅಷ್ಟೊಂದು ದೇಹಕ್ಕೆ ಒಳ್ಳೆಯದಲ್ಲ. ಮಾತ್ರವಲ್ಲದೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ನಂಬಿಕೆ ಇದೆ. ಚಿನ್ನ ಲಕ್ಷ್ಮಿ ದೇವಿಯ ಸಂಕೇತ. ಆದ್ದರಿಂದ ಚಿನ್ನವನ್ನು ಕಾಲಿಗೆ ಹಾಕಲು ಕೆಲವರು ಇಷ್ಟ ಪಡೋದಿಲ್ಲ.
ಬೆಳ್ಳಿ ಉಂಗುರ ಹಾಕುವುದರಿಂದ ಹಲವಾರು ಉಪಯೋಗಗಳಿವೆ. ಬೆಳ್ಳಿಯ ಕಾಲುಂಗುರ ಭೂಮಿಯ ಧ್ರುವಶಕ್ತಿಯನ್ನು ಹೀರಿಕೊಂಡು ದೇಹದಲ್ಲೆಲ್ಲಾ ಧನಾತ್ಮಕ ಶಕ್ತಿಯನ್ನು ಸಂಚಾರವಾಗುವಂತೆ ಮಾಡುತ್ತದೆ. ಜೊತೆಗೆ ಬೆಳ್ಳಿಗೆ ಚರ್ಮರೋಗವನ್ನು ತಡೆಯುವ ಶಕ್ತಿಯಿದೆ. ರಕ್ತದ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ಗರ್ಭಕೋಶ ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ.