ಪರಶುರಾಮ ಸೃಷ್ಟಿ ಕರಾವಳಿ ಪ್ರದೇಶದಲ್ಲಿ ತುಳು ಭಾಷೆಗೆ ಮಹತ್ತರವಾದ ಸ್ಥಾನವಿದೆ. ಹಾಗೆಯೇ ದೀಪಗಳ ಹಬ್ಬ ದೀಪಾವಳಿಯು ಇಲ್ಲಿ ಬಹಳ ವಿಶೇಷ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೇ ಕಾರ್ಕಳ ಉಡುಪಿ ಪ್ರದೇಶಗಳಲ್ಲಿ ದೀಪಾವಳಿ ಪಾಡ್ಯದಿಂದ ಪ್ರಾರಂಭಗೊಂಡು ಪ್ರತಿ ಹಗಲಲ್ಲಿ ನಲಿಕೆ ಜನಾಂಗದವರು ಮಾಂಕಾಳಿ ಕುಣಿತವನ್ನು ನಡೆಸುತ್ತಾರೆ. ಇದರ ಬಗೆಗಿನ ಒಂದು ಸಂಕ್ಷಿಪ್ತ ಚಿತ್ರಣವನ್ನು ಅರುಣ್ಯ ಫೌಂಡೇಶನ್ ಮಂಗಳೂರು ವತಿಯಿಂದ ಹಾಗೂ ನ್ಯೂಸ್ ಕರ್ನಾಟಕ, ವೆಸೆಲ್ ನೆಟ್ ವರ್ಕ್ಸ್ ಹಾಗೂ ಸೂಪರ್ ಏಜೆನ್ಸಿ ಇದರ ಸಹಯೋಗದಲ್ಲಿ ತುಳುನಾಡಿನ ಸಂಪ್ರದಾಯವಾದ ಮಾಂಕಾಳಿ ಸಂಸ್ಕೃತಿ ಬಗ್ಗೆ ಒಂದು ಸುಂದರ ಸಾಕ್ಷ್ಯಚಿತ್ರವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಮಾಂಕಾಳಿ ಕುಣಿತದಲ್ಲಿ ಒಬ್ಬ ನರ್ತಕ ಇರುತ್ತಾನೆ. ಈತ ಕಂಗಿನ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಮುಖಕ್ಕೆ ಹಿಡಿದುಕೊಳ್ಳುತ್ತಾನೆ. ಮುಖವಾಡವೆಂದರೆ ಕಣ್ಣು, ಮೂಗು, ತೆರೆದ ಬಾಯಿ, ಚಾಚಿದ ನಾಲಿಗೆಯನ್ನು ಬಿಳಿ, ಹಳದಿ, ಕಪ್ಪು, ಹಸಿರು, ಕೆಂಪು ಬಣ್ಣಗಳಿಂದ ತಯಾರಿಸುತ್ತಾರೆ. ಕುಣಿಯುವವ ಸೀರೆಯನ್ನು ನೆರಿಗೆ ಹಾಕಿ ಒಂದರ ಮೇಲೊಂದರಂತೆ ಹಂತಹಂತವಾಗಿ ಹಾಕಿ ಸೊಂಟಕ್ಕೆ ಕಟ್ಟಿಕೊಳ್ಳುತ್ತಾನೆ. ಕಾಲಿಗೆ ಗಗ್ಗರ ಕಟ್ಟಿ ಮೈಯನ್ನು ದೊಗಲೆ ಅಂಗಿಯಿಂದ ಮುಚ್ಚಿಕೊಳ್ಳುತ್ತಾನೆ. ಮುಖವಾಡದ ಹಿಂದಿನಿಂದ ಒಂದು ಸೀರೆಯನ್ನು ಇಳಿ ಬಿಟ್ಟಿರುತ್ತಾನೆ. ಇದು ಮುಖವಾಡ ಇಟ್ಟುಕೊಂಡ ವ್ಯಕ್ತಿಯ ಬೆನ್ನನ್ನು ಆವರಿಸುತ್ತದೆ. ಮುಖವಾಡವನ್ನು ಮುಖಕ್ಕೆ ಕಟ್ಟಿಕೊಳ್ಳುವುದಿಲ್ಲ. ಬದಲಿಗೆ ಎರಡು ಕೈಗಳಿಂದ ಮುಖದೆದುರು ಹಿಡಿದುಕೊಳ್ಳುತ್ತಾರೆ.
ಈ ಸಾಕ್ಷ್ಯಚಿತ್ರದಲ್ಲಿ ಮಾಂಕಾಳಿ ನರ್ತಕ ರಾಜ ಹಾಗೂ ಅವರ ಸಂಗಡಿಗರು ತಮ್ಮ ಸಂಸ್ಕೃತಿಯನ್ನು ಇಲ್ಲಿ ಪ್ರದರ್ಶಿಸಿದ್ದಾರೆ.
ಪ್ರಾರಂಭದಲ್ಲಿ 800 ವರ್ಷಗಳಷ್ಟು ಹಳೆಯ ವಿದ್ಯಾನಂದ ಅವರು ನೆಲೆಸಿರುವ ಗುತ್ತು ಮನೆಗೆ ಈ ಮಾಂಕಾಳಿ ತಂಡ ಹೋಗಿ ತಮ್ಮ ನೃತ್ಯವನ್ನು ಪ್ರದರ್ಶಿಸುತ್ತಾರೆ.ಮುಂದೆ ಎರಡನೆಯ ಮನೆ ಪ್ರೇಮ ಶೆಡ್ದಿ ಬೆಲೊಟ್ಟು ಗುತ್ತು ಮನೆಗೆ ಹೋಗುತ್ತಾರೆ. ದಿನದ ಕೊನೆಯಲ್ಲಿ ಈ ತಂಡವು ಪ್ರಸಾದ್ ಮನೋಳಿ ಗುತ್ತು ಮನೆಗೆ ಹೋಗಿ ತಮ್ಮ ನೃತ್ಯವನ್ನು ಪ್ರದರ್ಶಿಸುತ್ತಾರೆ.