ಮಂಗಳೂರು: ಕಳೆದ 2-3 ದಿನಗಳಿಂದ ಹಿಜಾಬ್ ವಿಚಾರವಾಗಿ ಗೊಂದಲವೇರ್ಪಟ್ಟಿದ್ದ ನಗರದ ರಥಬೀದಿಯಲ್ಲಿರುವ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಸಾರಲಾಗಿದೆ. ಅದೇರೀತಿ ಜಿಲ್ಲಾಧಿಕಾರಿಯ ನಿರ್ದೇಶನದಂತೆ ಸದ್ಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ..
ರಥಬೀದಿ ಕಾಲೇಜಿನಲ್ಲಿ ಗುರುವಾರ ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದರು. ಶುಕ್ರವಾರವೂ ಇದು ಮುಂದುವರಿದಿದ್ದು, ಐವರು ಹಿಜಾಬ್ ಧಾರಿ ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟ್ ಬಳಿ ಕೆಲವು ಉಪನ್ಯಾಸಕರು, ಹಾಗು ಕಾಲೇಜಿಗೆ ಸಂಬಂಧಿಸಿದ ಕೆಲವರು ತಡೆದಿದ್ದರು.
ಈ ಎಲ್ಲ ಗೊಂದಲದ ಹಿನ್ನೆಲೆಯಲ್ಲಿ ಇಂದಿನಿಂದ ಕಾಲೇಜಿಗೆ ಅನಿರ್ದಿಷ್ಟಾವಧಿಗೆ ರಜೆ ಘೋಷಿಸಿ ಕಾಲೇಜು ಆಡಳಿತ ಸಮಿತಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದೆ.