ಮೈಸೂರು: ಖ್ಯಾತ ತಮಿಳು ನಟ ವಿಶಾಲ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಲಾಠಿ ಡಿ.22 ರಂದು ಕನ್ನಡ ಸೇರಿದಂತೆ ನಾಲ್ಕು ಭಾಷೆಯಲ್ಲಿ ಬಿಡುಗಡೆ ಆಗಲಿದೆ ಎಂದು ನಟ ವಿಶಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕನ್ನಡ, ತಮಿಳು, ತೆಲಗು ಮತ್ತು ಮಲೆಯಾಳಂಗೆ ಡಬ್ ಆಗಿದ್ದು, ಹಿಂದಿಗೂ ಈ ಸಿನಿಮಾ ಡಬ್ ಆಗುತ್ತಿದ್ದು, ಡಿ.30 ರಂದು ಹಿಂದಿಯಲ್ಲಿ ಬಿಡುಗಡೆ ಆಗಲಿದೆ ಎಂದ ಅವರು ಇದುವರೆಗೆ ಪೊಲೀಸ್ ಉನ್ನತಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾನು ಈ ಸಿನಿಮಾದಲ್ಲಿ ಪೊಲೀಸ್ ಪೇದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಬಿಗ್ ಬಜೆಟ್ ಸಿನಿಮಾಗಳಲ್ಲಿ ಇದೂ ಕೂಡ ಒಂದು. ಎಲ್ಲರೂ ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳ ಕೇಂದ್ರೀಕೃತವಾಗಿ ಸಿನಿಮಾ ಮಾಡುತ್ತಾರೆ. ಆದರೆ ಒಬ್ಬ ನಟನಾಗಿ ನಾನು ಎಲ್ಲ ರೀತಿಯ ಪಾತ್ರಗಳನ್ನೂ ಮಾಡಲು ಇಚ್ಛಿಸುತ್ತೇನೆ. ಆದ್ದರಿಂದ ಒಬ್ಬ ಕಾನ್ಸ್ ಟೇಬಲ್ನ ದೃಷ್ಟಿಕೋನದಿಂದ ಈ ಚಿತ್ರ ಮಾಡಲಾಗಿದೆ ಎಂದು ತಿಳಿಸಿದರು.
ಹೊಸ ಯೋಚನೆಯ, ಹೊಸ ರೀತಿಯ ಚಿತ್ರ ಇದಾಗಿದ್ದು, ಪ್ರೇಕ್ಷಕರು ಚಿತ್ರ ನೋಡಿ ನಮ್ಮ ತಂಡಕ್ಕೆ ಪ್ರೋತ್ಸಾಹ ನೀಡಬೇಕೆಂಬುದು ನನ್ನ ಆಶಯ. ಆದ್ದರಿಂದ ಎಲ್ಲ ರಾಜ್ಯಗಳಿಗೂ ಸ್ವತಃ ನಾನೇ ಬಂದು ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಕನ್ನಡದಲ್ಲಿ ಒಳ್ಳೆಯ ಕಥೆ ಮತ್ತು ಅವಕಾಶ ದೊರಕಿದರೆ ನಟಿಸುವ ಆಸೆ ಇದೆ. ನನ್ನ ತಂದೆ ಕನ್ನಡದವರೇ ಆದ್ದರಿಂದ ನಾನು ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಅವರಲ್ಲಿದೆ. 2024ರ ನಂತರವೇ ಕನ್ನಡದಲ್ಲಿ ನಟನೆ, ನಿರ್ದೇಶನ ಸಾಧ್ಯ. ಅಲ್ಲಿಯವರೆಗೆ ಸಾಕಷ್ಟು ಸಿನಿಮಾಗಳ ಕೆಲಸವಿದೆ ಎಂದು ಅವರು ತಿಳಿಸಿದರು.
ಪೈರಸಿ ಒಂದು ಸಮಸ್ಯೆಯಾಗಿದೆ. ಆದರೆ ಒಂದು ಕೈಯಿಂದ ಯಾವಾಗಲೂ ಚಪ್ಪಾಳೆ ಆಗುವುದಿಲ್ಲ. ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಕಠಿಣ ಕಾನೂನು ಜಾರಿಗೊಳಿಸಿ ನಿಲ್ಲಿಸಬೇಕು. ಇಲ್ಲವಾದರೆ ಕಡಿವಾಣ ಹಾಕುವುದು ಕಷ್ಟವಾಗುತ್ತದೆ. ನಾವು ಲಿಂಕ್ಗಳನ್ನು ಡಿಲಿಟ್ ಮಾಡಬಹುದಷ್ಟೇ. ಆದರೆ ಸರ್ಕಾರ ಸೈಬರ್ ಅಪರಾಧ ಸಂಬಂಧ ಬಿಗಿಯಾದ ಕಾನೂನು ರೂಪಿಸಿದರೆ ಶಾಶ್ವತವಾಗಿ ಬ್ಯಾನ್ ಮಾಡಬಹುದು ಎಂದರು.
ನಾನು ಎಂದೆಂದಿಗೂ ಡಾ.ರಾಜ್ಕುಮಾರ್ ಅವರ ಕುಟುಂಬಕ್ಕೆ ಜೊತೆಯಾಗಿ ನಿಲ್ಲುತ್ತೇನೆ. ಶಕ್ತಿಧಾಮಕ್ಕೆ ಸಂಬಂಧಿಸಿದಂತೆ ಅವರು ಯಾವ ಸಹಾಯ ಕೇಳಿದರೂ ಮಾಡಲು ನಾನು ಸಿದ್ಧ. ಶಕ್ತಿಧಾಮದ ಮಕ್ಕಳಿಗೆ ಉಪಯೋಗವಾಗಲೆಂದು ಸಹಾಯ ಮಾಡಲು ಒಪ್ಪಿಕೊಂಡಿದ್ದೆ. ಈಗಲೂ ಮಕ್ಕಳಿಗೆ ಶಿಕ್ಷಣ ನೀಡಲು, ಪುನೀತ್ ರಾಜ್ಕುಮಾರ್ ಅವರ ಆಶಯಗಳನ್ನು ನೆರವೇರಿಸಲು ನಾನು ಬದ್ಧನಾಗಿದ್ದೇನೆ. ರಾಜ್ಕುಮಾರ್ ಅವರ ಕುಟುಂಬದವರು ಯಾವ ಸಮಯದಲ್ಲಿ ಯಾವ ಸಹಕಾರ ಕೇಳಿದರೂ ನೀಡಲು ನಾನು ಸಿದ್ಧ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ನಟ ಪ್ರಕಾಶ್ ರಾಜ್ ಅವರು ಅಪ್ಪು ಅವರ ಹೆಸರಿನಲ್ಲಿ ಆಂಬ್ಯುಲೆನ್ಸ್ ದಾನ ನೀಡಿದ್ದರ ಸಂಬಂಧ ಮಾತನಾಡಿದ ಅವರು, ಪುನೀತ್ ಅವರ ಹೆಸರಿನಲ್ಲಿ ಪ್ರಕಾಶ್ ರಾಜ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಅವರು ನನಗೂ ಕರೆ ಮಾಡಿದ್ದರು. ಆಂಬ್ಯುಲೆನ್ಸ್ ಸೇವೆಗೆ ನನ್ನ ಕೈಲಾದ ಸಹಾಯವನ್ನು ನಾನು ಮಾಡುತ್ತೇನೆ ಎಂದು ಅವರಿಗೆ ತಿಳಿಸಿದ್ದೇನೆ. ನಟರಾಗಿ ನಾವು ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರಬೇಕು. ಅದು ನಮ್ಮ ಆದ್ಯ ಕರ್ತವ್ಯ ಎಂದರು.