ಮೈಸೂರು: ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿ ಶಾಮಕ ದಳದ ತಂಡಗಳು ಸುಮಾರು ಅರ್ಧಗಂಟೆ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಹಳೇ ಪ್ರಾಧಿಕಾರ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭದ್ರತಾ ಸಿಬ್ಬಂದಿ, ವಾಹನ ಚಾಲಕರು ಬೆಂಕಿಯನ್ನು ಕಂಡು ತಮ್ಮ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬೆಂಕಿ ದುರಂತದಲ್ಲಿ ಪೀಠೋಪಕರಣಗಳು, ಸೈಬರ್ ಟಿವಿ, ಮಕ್ಕಳ ಡ್ರಾಯಿಂಗ್ ಪರಿಕರಗಳು ನಾಶವಾಗಿವೆ. ಅಗ್ನಿಶಾಮಕ ಠಾಣೆಗೆ ಕರೆ ಬಂದ ಮೇರೆಗೆ ಸುಮಾರು ಐದಾರು ಅಗ್ನಿಶಾಮಕ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಈ ಕುರಿತು ಮಾತನಾಡಿದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್, ಕಚೇರಿಯ ಟೇಬಲ್, ಕುರ್ಚಿ, ಸೈಬರ್ ಟಿವಿ, ಮಹಿಳಾ ಮತ್ತು ಮಕ್ಕಳ ವಿಭಾಗದ ಕೊಠಡಿಯಲ್ಲಿದ್ದ ಮೇಜು, ಕುರ್ಚಿ ಇತ್ಯಾದಿ ಪೀಠೋಪಕರಣಗಳು, ಮಕ್ಕಳ ಡ್ರಾಯಿಂಗ್ ಇತ್ಯಾದಿ ಪರಿಕರಗಳು ಸುಟ್ಟು ನಾಶವಾಗಿವೆ. ಎ ಮತ್ತು ಸಿ ಬ್ಲಾಕ್ನಲ್ಲಿರುವ ವಸ್ತುಪ್ರದರ್ಶನ ಮಳಿಗೆಗಳಿಗೆ ಬೆಂಕಿ ಹರಡಿಲ್ಲ. ಹಳೆಯ ಕಟ್ಟಡವಾಗಿದ್ದು ಆಕಸ್ಮಿಕಕ್ಕೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಯಾವುದೇ ದಾಖಲೆಗಳು ನಾಶವಾಗಿಲ್ಲ ಎಂದವರು ಸ್ಪಷ್ಟಪಡಿಸಿದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸರಸ್ವತಿಪುರಂನ ಅಗ್ನಿಶಾಮಕ ದಳದ ಅಧಿಕಾರಿ ರಾಜು ತಿಳಿಸಿದರು.