ಕೆ.ಆರ್.ಪೇಟೆ: ಟಾಟಾ ಎಸಿ ಮಗುಚಿ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿ ಪುಟ್ಟ ಮಕ್ಕಳು, ಗರ್ಭಿಣಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ರಾಜೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೂಲತಃ ವಿಜಯಪುರ ಜಿಲ್ಲೆಯ ಕಡ್ಡಿರಾಮಪುರ ತಾಂಡಾದ ನಿವಾಸಿ ಶಶಿಕಲಾ(20)ಮೃತಪಟ್ಟ ದುರ್ದೈವಿ. ಇವರೆಲ್ಲರೂ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಲು ಬಂದಿದ್ದರು. ಮೃತ ಶಶಿಕಲಾ ಮತ್ತು ಇತರರು ಮತ್ತೀಕೆರೆ ಬಳಿ ಕಬ್ಬು ಕಟಾವು ಮಾಡಿ ಗಂಜಿಗೆರೆ ಸಮೀಪದ ಆಸ್ಪತ್ರೆಯ ಹಿಂಭಾಗದಲ್ಲಿರುವ ತಾತ್ಕಾಲಿಕ ನಿವಾಸಕ್ಕೆ ತೆರಳುತ್ತಿದ್ದಾಗ ರಾಜೇನಹಳ್ಳಿ ಬಳಿ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಪರಿಣಾಮ ಶಶಿಕಲಾ, ಚಂದ್ರನಾಯಕ್, ಗಾಯಿತ್ರಿ, ಲಕ್ಷ್ಮೀ ಬಾಯಿ, ಪರಶುರಾಮ್, ಮಂಗಳನಾಯಕ್, ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಳಾಗಿದ್ದು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಗಂಭೀರ ಸ್ವರೂಪದ ಗಾಯಗಳಾಗಿದ್ದ ಶಶಿಕಲಾ ಮೈಸೂರಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಡಿದ್ದಾರೆ.
ಘಟನೆ ತಿಳಿದ ತಕ್ಷಣ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಿರಂಜನ್, ಪಿಎಸ್ ಐ ಪ್ರಮೋದ್ ಅವರು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಐದು ಜನರನ್ನು ತುರ್ತು ವಾಹನ ತಡವಾದ ಕಾರಣ ಇಲಾಖೆಯ ವಾಹನದಲ್ಲಿಯೇ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಪ್ರಕರಣ ದಾಖಲಿಸಲಾಗಿದೆ.