ತಮಿಳುನಾಡಿನ ಹೆಸರಾಂತ ನಟ ದಳಪತಿ ವಿಜಯ್ ನಟನೆಗೆ ವಿದಾಯ ಹೇಳಿ ರಾಜಕೀಯ ಪ್ರವೇಶಿಸುತ್ತಿದ್ದಂತೆಯೇ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶಕನಾಗಿ ಸಿನಿಮಾ ರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಈಗಾಗಲೇ ಕೆಲ ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡಿರುವ ಜೇಸನ್ ನಟನಾಗುವ ನಿರೀಕ್ಷೆ ಕೆಲ ವರ್ಷಗಳ ಹಿಂದೆಯೇ ಇತ್ತು. ಅವರ ಸಿನಿಮಾಕ್ಕೆ ವಿಜಯ್ ಸೇತುಪತಿ ಬಂಡವಾಳ ಹೂಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಈಗ ಆ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದು, ದಳಪತಿ ವಿಜಯ್ ಮಗ ನಿರ್ದೇಶಕರಾಗಲು ಇಚ್ಛಿಸಿದ್ದಾರೆ.
ತಮ್ಮ ಮೊದಲ ಚಿತ್ರ ನಿರ್ದೇಶನದ ತಯಾರಿ ನಡೆಸಿರುವ ಜೇಸನ್, ಪ್ಯಾನ್ ಇಂಡಿಯಾ ಸ್ಟಾರ್ ನಟ ದುಲ್ಕರ್ ಸಲ್ಮಾನ್ರನ್ನು ತಮ್ಮ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಚಿತ್ರಕ್ಕೆ ಎಆರ್ ಅಮೀನ್ ಸಂಗೀತ ನೀಡಲಿದ್ದು, ನಿರ್ದೇಶಕ ಶಂಕರ್ ಅವರ ಪುತ್ರಿ ಅದಿತಿ ಈ ಸಿನಿಮಾ ಮೂಲಕ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಟೊರಂಟೊ ಫಿಲಮ್ ಇನ್ಸ್ಟಿಟ್ಯೂಟ್ನಿಂದ ಸಿನಿಮಾ ನಿರ್ಮಾಣದ ಪದವಿ ಮುಗಿಸಿರುವ ಜೇಸನ್, ಲಂಡನ್ ಫಿಲಮ್ ಸ್ಕೂಲ್ನಿಂದ ಸ್ಕ್ರೀನ್ ರೈಟಿಂಗ್ ತರಬೇತಿಯನ್ನೂ ಪಡೆದುಕೊಂಡಿದ್ದಾರೆ.