ಹಲವು ನಿರೀಕ್ಷೆಗಳ ನಡುವೆ ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಯಿತು. ಜೂನ್ 16ರಂದು ಬಿಡುಗಡೆಯಾದ ಈ ಸಿನಿಮಾ ಟೀಕೆಗೆ ಗುರಿಯಾಗುತ್ತಿದೆ. ರಾಮಾಯಣವನ್ನು ನಂಬುವವರು ಸಾಕಷ್ಟು ಜನರಿದ್ದಾರೆ. ರಾಮ ಹಾಗೂ ಹನುಮಂತನ ಭಕ್ತರ ಸಂಖ್ಯೆಯೂ ದೊಡ್ಡದಿದೆ. ಇವರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ‘ಆದಿಪುರುಷ್’ ಮಾಡಿದೆ ಎಂದು ಈ ಸಿನಿಮಾ ಮೇಲೆ ನಿಷೇಧ ಹೇರುವಂತೆ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
‘ತುರ್ತಾಗಿ ಅರ್ಜಿ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದೆ. ‘ನೇಪಾಳ ಈ ಸಿನಿಮಾನ ಬ್ಯಾನ್ ಮಾಡಿದೆ. ಚಿತ್ರದಲ್ಲಿ ಅನೇಕ ವಿವಾದಾತ್ಮಕ ವಿಚಾರಗಳಿವೆ. ಅದರಿಂದ ಅಂತರರಾಷ್ಟ್ರೀಯ ಸಂಬಂಧಗಳಿಗೆ ಅಡ್ಡಿಯಾಗಬಹುದು. ತುರ್ತಾಗಿ ಅರ್ಜಿ ವಿಚಾರಣೆ ನಡೆಸಬೇಕು’ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಆದರೆ, ಇದಕ್ಕೆ ಹೈಕೋರ್ಟ್ ಒಪ್ಪಿಲ್ಲ. ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಸದ್ಯಕ್ಕೆ ತರಾತುರಿ ಏನಿಲ್ಲ. ಜೂನ್ 30ಕ್ಕೆ ಬನ್ನಿ” ಎಂದು ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಇದರಿಂದ ಸಹಜವಾಗಿಯೇ ‘ಆದಿಪುರುಷ್‘ ಚಿತ್ರಕ್ಕೆ ರಿಲೀಫ್ ಸಿಕ್ಕಂತಾಗಿದೆ.