ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಜೂನ್ 16 ರಂದು ವಿಶ್ವದಾದ್ಯಂತ ಸುಮಾರು 12,000 ಸ್ಕ್ರೀನ್ಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾ ಬಿಡುಗಡೆ ಬಗ್ಗೆ ತೆಲುಗು ರಾಜ್ಯಗಳ ಜನಪ್ರಿಯ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.
‘ಆದಿಪುರುಷ್ ಸಿನಿಮಾ ಹಿಂದೂಪರ, ಶ್ರೀರಾಮನ ಕುರಿತಾದ ಸಿನಿಮಾ ಆಗಿದ್ದರೂ ಸಹ ಜನ ತುಂಬಾ ಆಸಕ್ತಿಯನ್ನು ಈ ಸಿನಿಮಾ ಬಗ್ಗೆ ತೋರಿಸುವುದಿಲ್ಲ. ಕಂಟೆಂಟ್ ಇಲ್ಲದ ಸಿನಿಮಾಗಳನ್ನು, ಗುಣಮಟ್ಟ ಇಲ್ಲದ ಸಿನಿಮಾಗಳನ್ನು ಜನ ನೋಡುವುದಿಲ್ಲ. ಅದು ಮಾತ್ರವೇ ಅಲ್ಲದೆ ಪ್ರಭಾಸ್ ಗ್ರಹಗತಿಗಳು ಸಹ ಸರಿಯಿಲ್ಲ. ಇದೇ ಕಾರಣದಿಂದ ಅವರ ಸಿನಿಮಾಗಳು ಸತತವಾಗಿ ಸೋಲುತ್ತಿವೆ. ಆದಿಪುರುಷ್ ಸಿನಿಮಾ ಬಾಹುಬಲಿಯಂತೆ ದೊಡ್ಡ ಯಶಸ್ಸು ಪಡೆಯುವುದಿಲ್ಲ’ ಎಂದಿದ್ದಾರೆ.
ಮಕ್ಕಳು ಸಿನಿಮಾ ನೋಡಿಬಿಟ್ಟರೆ ಸಿನಿಮಾ ದೊಡ್ಡ ಹಿಟ್ ಆಗಿಬಿಡುತ್ತದೆ ಎಂಬುದೆಲ್ಲ ಕೇವಲ ಊಹಾಪೋಹವಷ್ಟೆ. ಸಿನಿಮಾದ ಯಶಸ್ಸು ಸಹ ನಕ್ಷತ್ರಗಳು, ಗ್ರಹಗತಿಯನ್ನು ಆಧರಿಸಿರುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಭಾಸ್ ಗ್ರಹಗತಿ ಸರಿಯಿಲ್ಲ ಎಂದಿದ್ದಾರೆ.
ಜ್ಯೋತಿಷಿ ವೇಣು ಸ್ವಾಮಿ ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ. ಸಮಂತಾ-ನಾಗ ಚೈತನ್ಯ ವಿಚ್ಛೇದನದ ಕುರಿತಾಗಿ ವೇಣುಸ್ವಾಮಿ ಭವಿಷ್ಯ ಹೇಳಿದ್ದರು. ಅಖಿಲ್ ಸಿನಿಮಾಗಳು ಸತತವಾಗಿ ಸೋಲುತ್ತವೆಂದೂ ಭವಿಷ್ಯ ಹೇಳಿದ್ದರು. ರಶ್ಮಿಕಾ ಮಂದಣ್ಣ ಇದೇ ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ ಬಳಿಕ ಬೇಡಿಕೆಯ ನಟಿಯಾದರು.