ಮೈಸೂರು: ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಗೀತ ಕ್ಷೇತ್ರದ ಸಾಧಕರಿಗೆ ಸಂಗೀತ ಕಲಾ ಸಾರಥಿ ಪ್ರಶಸ್ತಿ ಪ್ರಧಾನ ಹಾಗೂ ಸಂಗೀತದಿಂದ ಆರೋಗ್ಯ ವಿಚಾರ ಮಂಥನ ಕಾರ್ಯಕ್ರಮವನ್ನು ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ನಡೆಯಿತು.
ಇದೇ ವೇಳೆ ವಿದ್ವಾನ್ ಗಣೇಶ ಭಟ್ ( ಕೀಬೋರ್ಡ್ ವಾದಕರು,) ವಿದ್ವಾನ್ ರಾಘವೇಂದ್ರ ರತ್ನಾಕರ್ (ಗಾಯಕರು), ವಿದ್ವಾನ್ ಡಿ. ರಾಜಕುಮಾರ್ (ತಾಳವಾದ್ಯ), ವಿದೂಷಿ ದಿವ್ಯಾ ಸಾಚಿ (ಗಾಯಕಿ), ವಿದ್ವಾನ್ ಎಮ್.ಸಿ. ಜಗದೀಶ್ (ತಬಲಾ ವಾದಕರು), ವಿದ್ವಾನ್ ಗುರುದತ್ (ರಿದಂಪ್ಯಾಡ್ ವಾದಕರು) ಕಲಾ ಸಾರಥಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ ಅವರು, ಸಂಗೀತ ಕೇವಲ ಮನೋರಂಜನೆಗೆ ಸೀಮಿತವಾಗಿಲ್ಲ. ಅದು ರೋಗಿಗಳ ಆರೋಗ್ಯ ಸುಧಾರಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಸಂಗೀತ ಹೃದಯಕ್ಕೆ ಸಂಬಂಧಿಸಿದ ಜೊತೆಯಲ್ಲೇ ಅದು ಮಾನಸಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರಲಿದೆ. ನರಸಂಬಂಧಿ ಸಮಸ್ಯೆಗಳು ಹಾಗೂ ಮೆದುಳಿನ ಸಮಸ್ಯೆಗಳಿಗೆ ಸಂಗೀತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿವೆ ಎಂದರು.
ತಾಳವಾದ್ಯ ಪ್ರತಿಷ್ಠಾನದ ಅಧ್ಯಕ್ಷರಾದ ವಿದ್ವಾನ ಡಾ.ರಾಘವೇಂದ್ರ ಪ್ರಸಾದ್ ರವರು ಮಾತನಾಡಿ ಸಂಗೀತದಿಂದ ಮಕ್ಕಳ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಅವರ ಮೆದುಳು ಚುರುಕುಗೊಳ್ಳುತ್ತದೆ. ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಪಾರ್ಕಿನ್ಸನ್, ಡೆಮಿನ್ಶಿಯಾ, ಆಟಿಸಂನಂತಹ ಕಾಯಿಲೆಗಳಿಗೆ ಸಂಗೀತ ಚಿಕಿತ್ಸೆ ಕುರಿತು ಅಧ್ಯಯನಗಳು ನಡೆಯುತ್ತಿವೆ. ನಿಮ್ಹಾನ್ಸ್ನಲ್ಲಿ ಸಂಗೀತ ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ಮಾನಸಿಕ ರೋಗಿಗಳಿಗೆ ಇದರ ಮೂಲಕ ಚಿಕಿತ್ಸೆ ನೀಡುವ ಪ್ರಯತ್ನವೂ ಸಾಗಿದೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾ ನಂದೀಶ್ ಮಾತನಾಡಿ, ಸಂಗೀತ ಕಾರ್ಯಕ್ರಮಗಳು ಕಲಾಭಿಮಾನಿಗಳಿಗೆ ನೆಮ್ಮದಿಯ ಔಷಧಿ ನೀಡುತ್ತದೆ. ದೇವರನಾಮ, ಭಜನೆ, ಸುಗಮ ಸಂಗೀತದಿಂದ ಹಿರಿಯ ನಾಗರಿಕರಿಗೆ ಬದುಕಿನ ಶಕ್ತಿ ಸಿಗುತ್ತದೆ. ಆಕಾಶವಾಣಿ, ದೂರದರ್ಶನ, ಸಂಗೀತ ವಿಶ್ವವಿದ್ಯಾ ನಿಲಯಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಾಮಾಜಿಕ ಜಾಲತಾಣದ ಮೂಲಕ ಕಲಾವಿದರನ್ನು ಗುರುತಿಸಿ ಮುಖ್ಯ ವಾಹಿನಿಗೆ ತಂದು ಕಲಾಭಿಮಾನಿಗಳಿಗೆ ಪರಿಚಯಿಸಲು ಯೋಜನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಮಿರ್ಲೆ ಫಣೀಶ್, ಸುಚಿಂದ್ರ, ಚಂದ್ರು, ಸೂರಜ್, ಹಾಗೂ ಇನ್ನಿತರರು ಹಾಜರಿದ್ದರು.