ಮುಂಬೈ: ಮೇ 26ರಂದು ನಡೆದ ಎಸ್ಆರ್ಎಚ್ ಹಾಗೂ ಕೆಕೆಆರ್ ನಡುವಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೆಕೆಆರ್ ಗೆದ್ದು ಬೀಗಿದೆ. ಫಿನಾಲೆ ಪಂದ್ಯದಲ್ಲಿ ಕೇವಲ ಹೈದರಾಬಾದ್ ತಂಡ ನೀಡಿದ್ದು 113 ರನ್ಗಳ ಟಾರ್ಗೆಟ್.
ಕೇವಲ 10 ಓವರ್ಗಳಲ್ಲಿ ಈ ಗುರಿಯನ್ನು ಕೆಕೆಆರ್ ತಂಡ ಬೆನ್ನು ಹತ್ತಿದೆ. ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರು ಕಣ್ಣೀರು ಹಾಕಿದ್ದಾರೆ. ಅವರನ್ನು ನೋಡಿ ಬೇಸರ ಆಗುತ್ತಿದೆ ಎಂದು ಅಮಿತಾಭ್ ಬಚ್ಚನ್ ಹೇಳಿಕೊಂಡಿದ್ದಾರೆ. ಜೊತೆಗೆ ಕಾವ್ಯಾಗೆ ಕಿವಿಮಾತು ಕೂಡ ಹೇಳಿದ್ದಾರೆ.
‘ಐಪಿಎಲ್ ಫೈನಲ್ ಮುಗಿದಿದೆ. ಕೆಕೆಆರ್ ಸುಲಭ ಜಯ ಸಾಧಿಸಿದೆ. ಎಸ್ಆರ್ಎಚ್ ಒಳ್ಳೆಯ ತಂಡವೇ ಆಗಿತ್ತು. ಇತರ ತಂಡಗಳೊಂದಿಗೆ ಅವರು ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದರು. ಆದರೆ, ಫಿನಾಲೆಯಲ್ಲಿ ಅವರ ಆಟ ನಿರಾಶಾದಾಯಕವಾಗಿತ್ತು’ ಎಂದಿದ್ದಾರೆ ಅಮಿತಾಭ್ ಬಚ್ಚನ್.
‘ಎಸ್ಆರ್ಹೆಚ್ನ ಮಾಲೀಕರು ಗಮನ ಸೆಳೆದರು. ತಮ್ಮ ತಂಡ ಸೋತ ನಂತರ ಭಾವೋದ್ವೇಗಕ್ಕೆ ಒಳಗಾಗುತ್ತಾ, ಕಣ್ಣೀರು ಹಾಕಿದ್ದಾರೆ. ಕ್ಯಾಮೆರಾಗಳಿಂದ ಮುಖವನ್ನು ತಿರುಗಿಸಿದರು. ಈ ಮೂಲಕ ಭಾವನೆಗಳು ಹೊರಗಿನ ಜಗತ್ತಿಗೆ ಗೊತ್ತಾಗದೆ ಇರಲಿ ಎಂದು ಪ್ರಯತ್ನಿಸಿದರು. ನನಗೆ ಅವರ ಬಗ್ಗೆ ಬೇಸರ ಇದೆ’ ಎಂದಿರುವ ಅಮಿತಾಭ್, ‘ಆ ಬಗ್ಗೆ ಬೇಸರ ಬೇಡ. ನಾಳೆ ಹೊಸ ದಿನ ಆರಂಭ ಆಗುತ್ತದೆ’ ಎಂದು ಕಿವಿಮಾತು ಹೇಳಿದ್ದಾರೆ.