ಬಹಳ ನಿರೀಕ್ಷೆ ಮೂಡಿಸಿದ್ದ ಆದಿಪುರುಷ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ. ಗಳಿಕೆಯಲ್ಲಿ ವಿಫಲವಾಗಿರುವುದು ಮಾತ್ರವೇ ಅಲ್ಲದೆ ಪ್ರೇಕ್ಷಕರ ನಿಂದನೆಗೂ ಕಾರಣವಾಗಿದೆ. ಆದಿಪುರುಷ್ ಸಿನಿಮಾ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ಹಲವರು ಆರೋಪಿಸಿದ್ದು ಸಿನಿಮಾದ ವಿರುದ್ಧ ಹಲವು ದೂರುಗಳು ದಾಖಲಾಗಿವೆ. ಅದರಲ್ಲಿಯೂ ಸಿನಿಮಾದ ಕೆಲವು ಸಂಭಾಷಣೆಗಳ ವಿರುದ್ಧ ತೀವ್ರ ಆಕ್ಷೇಪ ಸಹ ವ್ಯಕ್ತವಾಗಿದೆ. ಇದೀಗ ಆದಿಪುರುಷ್ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಶುಕ್ಲಾ ಪ್ರೇಕ್ಷಕರ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಆದಿಪುರುಷನಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಜೋಡಿಸಿದ ಕೈಗಳಿಂದ, ನಾನು ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಭಜರಂಗ ಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಮತ್ತು ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ” ಎಂದು ಮನೋಜ್ ಮುಂತಶೀರ್ ಶುಕ್ಲಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಆದರೆ ಅದನ್ನು ಒಂದು ವರ್ಗದ ಜನರು ಒಪ್ಪಿಕೊಂಡಿಲ್ಲ. ಮನೋಜ್ ಮುಂತಶೀರ್ ಶುಕ್ಲಾ ‘ಆದಿಪುರುಷ್’ ಚಿತ್ರದಿಂದ ಪಡೆದ ಸಂಭಾವನೆಯನ್ನು ಗೋಶಾಲೆ ಮತ್ತು ದೇವಸ್ಥಾನಕ್ಕೆ ದಾನ ನೀಡಬೇಕು ಎಂದು ಕೂಡ ಅನೇಕರು ಕಮೆಂಟ್ ಮಾಡಿದ್ದಾರೆ.